ಮಾತುಕತೆಗೆ ಒಲವು ವ್ಯಕ್ತಪಡಿಸಿ ಭಾರತದಿಂದ ಸಂದೇಶ: ಪಾಕ್ ಪ್ರಧಾನಿಯ ವಿಶೇಷ ಸಲಹೆಗಾರ
ಇಸ್ಲಾಮಾಬಾದ್, ಅ. 13: ಮಾತುಕತೆಗೆ ಒಲವು ವ್ಯಕ್ತಪಡಿಸಿ ಭಾರತವು ಪಾಕಿಸ್ತಾನಕ್ಕೆ ಸಂದೇಶವೊಂದನ್ನು ಕಳುಹಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ರ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ನೀತಿ ಯೋಜನೆ ಕುರಿತ ಸಲಹೆಗಾರ ಮುಯೀದ್ ಯೂಸುಫ್ ಹೇಳಿದ್ದಾರೆ. ಆದರೆ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.
ಮಾತುಕತೆಗಳಿಗೆ ಭಾರತ ಒಲವು ವ್ಯಕ್ತಪಡಿಸಿದೆ, ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಡಲಾಗಿರುವ ಹಲವು ಬದಲಾವಣೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವುದು ಸೇರಿದಂತೆ ಹಲವು ಷರತ್ತುಗಳನ್ನು ನಾನು ಒಡ್ಡಿದ್ದೇನೆ ಎಂದು ಅವರು ಹೇಳಿದರು.
‘‘ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವುದು, ಕಾಶ್ಮೀರಿಗಳನ್ನು ಭಾರತ-ಪಾಕಿಸ್ತಾನ ಮಾತುಕತೆಯ ಒಂದು ಪಕ್ಷವನ್ನಾಗಿ ಮಾಡುವುದು, ವಲಯದಲ್ಲಿರುವ ನಿರ್ಬಂಧಗಳನ್ನು ತೆಗೆದುಹಾಕುವುದು, ಕಾಶ್ಮೀರದಲ್ಲಿ ಕಾಶ್ಮೀರೇತರರಿಗೆ ನೆಲೆಸಲು ಅವಕಾಶ ನೀಡುವ ಕಾನೂನುಗಳನ್ನು ರದ್ದುಪಡಿಸುವುದು ಹಾಗೂ ಮಾನವಹಕ್ಕು ಉಲ್ಲಂಘನೆಗಳನ್ನು ನಿಲ್ಲಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ನಾನು ಭಾರತಕ್ಕೆ ಒಡ್ಡಿದ್ದೇನೆ’’ ಎಂದು ‘ದ ವೈರ್’ ಸುದ್ದಿ ವೆಬ್ಸೈಟ್ಗಾಗಿ ಪತ್ರಕರ್ತ ಕರಣ್ ಥಾಪರ್ಗೆ ನೀಡಿದ ಸಂದರ್ಶನದಲ್ಲಿ ಮುಯೀದ್ ಹೇಳಿದ್ದಾರೆ.