ಪ್ರವಾಸಿ ವೀಸಾ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಸಾಗರೋತ್ತರ ಭಾರತೀಯರು, ವಿದೇಶಿಗರು ಭಾರತಕ್ಕೆ ಭೇಟಿ ನೀಡಬಹುದು: ಕೇಂದ್ರ
ಹೊಸದಿಲ್ಲಿ, ಅ.23: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ವೀಸಾ ಮತ್ತು ಪ್ರಯಾಣ ನಿರ್ಬಂಧಗಳನ್ನು ಕೇಂದ್ರ ಸರಕಾರ ಸಡಿಲಿಸಿದ್ದು, ಒಸಿಐ ಕಾರ್ಡ್ (ಸಾಗರೋತ್ತರ ಭಾರತೀಯ ಪೌರರ ಚೀಟಿ) ಹೊಂದಿರುವವರು ಹಾಗೂ ವಿದೇಶಿ ನಾಗರಿಕರು ಪ್ರವಾಸಿ ವೀಸಾ ಹೊರತುಪಡಿಸಿ ಇತರ ಯಾವುದೇ ಉದ್ದೇಶಕ್ಕೆ ಭಾರತಕ್ಕೆ ಭೇಟಿ ನೀಡಬಹುದು ಎಂದು ಹೇಳಿದೆ.
ಭಾರತಕ್ಕೆ ಆಗಮಿಸುವ ಅಥವಾ ಭಾರತದಿಂದ ತೆರಳ ಬಯಸುವ ವಿದೇಶಿ ಮತ್ತು ಭಾರತೀಯ ನಾಗರಿಕರಿಗೆ ವೀಸಾ ಮತ್ತು ಪ್ರಯಾಣ ನಿರ್ಬಂಧದಲ್ಲಿ ಹಂತಹಂತವಾಗಿ ರಿಯಾಯಿತಿ ನೀಡಲು ಸರಕಾರ ನಿರ್ಧರಿಸಿದೆ. ವಾಯುಯಾನ ಕ್ಷೇತ್ರದ ಚಟುವಟಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ, ಸುಮಾರು ಎಂಟು ತಿಂಗಳ ಹಿಂದೆ ಅಮಾನತುಗೊಳಿಸಿದ್ದ ಎಲ್ಲಾ ವೀಸಾಗಳ(ಇಲೆಕ್ಟ್ರಾನಿಕ್ ವೀಸಾ, ಪ್ರವಾಸಿ ವೀಸಾ ಮತ್ತು ಮೆಡಿಕಲ್ ವೀಸಾ ಹೊರತುಪಡಿಸಿ) ಸಿಂಧುತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಹೇಳಿಕೆ ತಿಳಿಸಿದೆ. ವಂದೇ ಭಾರತ್ ಯೋಜನೆ , ಏರ್ ಟ್ರಾನ್ಸ್ಪೋರ್ಟ್ ಬಬಲ್ ವ್ಯವಸ್ಥೆ ಅಥವಾ ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದ ಅನುಸೂಚಿತವಲ್ಲದ ವಾಣಿಜ್ಯ ವಿಮಾನ ಸೇವೆ ಸಹಿತ ಅಧಿಕೃತ ವಾಯು ಅಥವಾ ಜಲ ಮಾರ್ಗದ ಮೂಲಕ ಅನಿವಾಸಿ ಭಾರತೀಯ ಪ್ರಜೆಗಳು ಮತ್ತು ವಿದೇಶಿ ನಾಗರಿಕರಿಗೆ ದೇಶವನ್ನು ಪ್ರವೇಶಿಸಲು ಅವಕಾಶ ನೀಡಲಾಗಿದೆ. ಆದರೆ ಎಲ್ಲಾ ಪ್ರಯಾಣಿಕರೂ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿರುವ ಕ್ವಾರಂಟೈನ್ ಹಾಗೂ ಇತರ ಕೋವಿಡ್ ಶಿಷ್ಟಾಚಾರವನ್ನು ಪಾಲಿಸಬೇಕು ಎಂದು ಗೃಹ ಇಲಾಖೆಯು ಹೇಳಿಕೆ ತಿಳಿಸಿದೆ.