ಪಾಕ್ ಪ್ರತಿಪಕ್ಷ ನಾಯಕನ ವಿರುದ್ಧ ದೇಶದ್ರೋಹ ಪ್ರಕರಣ?
ಪೈಲಟ್ ಅಭಿನಂದನ್ ವರ್ಧಮಾನ್ ಬಿಡುಗಡೆ ಪ್ರಕರಣ
ಫೋಟೊ ಕೃಪೆ :twitter.com
ಲಾಹೋರ್ (ಪಾಕಿಸ್ತಾನ), ನ. 2: ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ರನ್ನು ಪಾಕಿಸ್ತಾನ ಒತ್ತಡಕ್ಕೊಳಗಾಗಿ ಮರಳಿಸಿದೆ ಎಂಬುದಾಗಿ ಹೇಳಿಕೆ ನೀಡಿರುವ ಪಾಕಿಸ್ತಾನ್ ಮುಸ್ಲಿಮ್ ಲೀಗ್- ನವಾಝ್ ಪಕ್ಷದ ನಾಯಕ ಸರ್ದಾರ್ ಅಯಾಝ್ ಸಾದಿಕ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವ ಬಗ್ಗೆ ಪಾಕಿಸ್ತಾನ ಸರಕಾರ ಪರಿಶೀಲಿಸುತ್ತಿದೆ ಎಂದು ದೇಶದ ಗೃಹ ಸಚಿವ ಇಜಾಝ್ ಶಾ ಹೇಳಿದ್ದಾರೆ.
‘‘ಅಭಿನಂದನ್ ವರ್ಧಮಾನ್ ಬಂಧನ ಹಾಗೂ ಭದ್ರತಾ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಕರೆಯಲಾದ ಉನ್ನತ ನಾಯಕರ ಸಭೆಯಲ್ಲಿ ಕಾಲುಗಳು ನಡುಗುತ್ತಿದ್ದವು ಹಾಗೂ ಮುಖಗಳಿಂದ ಬೆವರಿಳಿಯುತ್ತಿತ್ತು. ಆಗ ವಿದೇಶ ಸಚಿವ ಶಾ ಮಹ್ಮೂದ್ ಖುರೇಶಿ, ಅಭಿನಂದನ್ ವಾಪಸ್ ಹೋಗಲಿ. ಇಲ್ಲದಿದ್ದರೆ ರಾತ್ರಿ 9 ಗಂಟೆಗೆ ಭಾರತ ದಾಳಿ ನಡೆಸಲಿದೆ ಎಂದು ಹೇಳಿದರು’’ ಎಂದು ಅಯಾಝ್ ಸಾದಿಕ್ ಬುಧವಾರ ಸಂಸತ್ತು ನ್ಯಾಶನಲ್ ಅಸೆಂಬ್ಲಿಯಲ್ಲಿ ಹೇಳಿದ್ದರು.
ಅವರ ವಿರುದ್ಧ ಪೊಲೀಸರಿಗೆ ಹಲವು ದೂರುಗಳು ಬಂದಿದ್ದು, ದೇಶದ್ರೋಹ ಪ್ರಕರಣ ದಾಖಲಿಸುವ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಇಜಾಝ್ ಶಾ ಹೇಳಿದರು.
‘‘ಭಾರತದ ಪರವಾಗಿ ಇರುವವರು ಅಮೃತಸರಕ್ಕೆ ಹೋಗುವುದು ಒಳ್ಳೆಯದು’’ ಎಂಬುದಾಗಿಯೂ ಅವರು ಹೇಳಿದರು.