ಭಾರತ ಮೂಲದ ಲೇಖಕಿಯ ಪುಸ್ತಕಕ್ಕೆ ಬ್ರಿಟನ್ನ ಪ್ರತಿಷ್ಠಿತ ಪ್ರಶಸ್ತಿ
ಫೋಟೊ ಕೃಪೆ: @tweeter_anita/ Twitter
ಲಂಡನ್, ಡಿ. 2: 1919ರ ಜಲಿಯನ್ವಾಲಾಬಾಗ್ ಹತ್ಯಾಕಾಂಡದಲ್ಲಿ ಸಿಲುಕಿಕೊಂಡ ಯುವಕನೊಬ್ಬನ ಕತೆಯನ್ನು ಹೇಳುವ, ಭಾರತ ಸಂಜಾತ ಬ್ರಿಟಿಶ್ ಪತ್ರಕರ್ತೆ ಹಾಗೂ ಲೇಖಕಿ ಅನಿತಾ ಆನಂದ್ರ ಪುಸ್ತಕಕ್ಕೆ ಬ್ರಿಟನ್ನ ಪ್ರತಿಷ್ಠಿತ ಪ್ರಶಸ್ತಿಯೊಂದು ಲಭಿಸಿದೆ.
‘ದ ಪೇಶಂಟ್ ಅಸಾಸಿನ್: ಎ ಟ್ರೂ ಟೇಲ್ ಆಫ್ ಮ್ಯಾಸಾಕರ್, ರಿವೇಂಜ್ ಆ್ಯಂಡ್ ದ ರಾಜ್’ ಪುಸ್ತಕವು ಇತರ ಆರು ಪುಸ್ತಕಗಳನ್ನು ಹಿಂದಿಕ್ಕಿ ‘ಪಿಇಎನ್ ಹೆಸೆಲ್-ಟಿಲ್ಟ್ಮನ್ ಪ್ರೈಝ್ ಫಾರ್ ಹಿಸ್ಟರಿ 2020’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಮುಖ್ಯವಾಗಿ ಐತಿಹಾಸಿಕ ವಿಷಯಗಳನ್ನು ಒಳಗೊಂಡ ಕಾದಂಬರಿಯೇತರ ಪುಸ್ತಕವೊಂದಕ್ಕೆ ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
‘‘1919ರಲ್ಲಿ ಅಮೃತಸರದ ಜಲಿಯನ್ವಾಲಾಬಾಗ್ನಲ್ಲಿ ನಡೆದ ಹತ್ಯಾಕಾಂಡಕ್ಕಾಗಿ, ಅದರಲ್ಲಿ ಆಂಶಿಕವಾಗಿ ಶಾಮೀಲಾದ ಬ್ರಿಟಿಶ್ ಅಧಿಕಾರಿಯೊಬ್ಬನನ್ನು ಎರಡು ದಶಕಗಳ ಬಳಿಕ ಭಾರತೀಯನೊಬ್ಬ ಕೊಂದು ಸೇಡು ತೀರಿಸಿಕೊಂಡ ಕತೆಯನ್ನು ಈ ಪುಸ್ತಕ ಒಳಗೊಂಡಿದೆ. ಆದರೆ, ಈ ಪುಸ್ತಕವು ಈ ಇಬ್ಬರ ಕತೆಗಿಂತಲೂ ಹೆಚ್ಚಿನದನ್ನು ಒಳಗೊಂಡಿದೆ’’ ಎಂದು ಪ್ರಶಸ್ತಿ ಆಯ್ಕೆಗಾರರ ಸಮಿತಿಯ ಅಧ್ಯಕ್ಷ ರಾಣಾ ಮಿತ್ತರ್ ಹೇಳುತ್ತಾರೆ.