ಮೂವರು ಭಾರತೀಯ ಶಾಂತಿಪಾಲಕರಿಗೆ ವಿಶ್ವಸಂಸ್ಥೆಯ ಮರಣೋತ್ತರ ಗೌರವ
ವಿಶ್ವಸಂಸ್ಥೆ, ಮೇ 28: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಳೆದ ವರ್ಷ ಹುತಾತ್ಮರಾದ ಮೂವರು ಭಾರತೀಯ ಸೈನಿಕರಿಗೆ ವಿಶ್ವಸಂಸ್ಥೆಯ ಮರಣೋತ್ತರ ಶೌರ್ಯ ಪದಕಗಳನ್ನು ನೀಡಿ ಗೌರವಿಸಲಾಗಿದೆ. ಇದೇ ಸಂದರ್ಭದಲ್ಲಿ ಕರ್ತವ್ಯದ ವೇಳೆ ಮೃತಪಟ್ಟ ಇತರ 126 ಸೇನಾ, ಪೊಲೀಸ್ ಮತ್ತು ನಾಗರಿಕ ಸಿಬ್ಬಂದಿಯನ್ನೂ ಮರಣೋತ್ತರ ಶೌರ್ಯ ಪ್ರಶಸ್ತಿಗಳಿಂದ ಸನ್ಮಾನಿಸಲಾಗಿದೆ.
ದಕ್ಷಿಣ ಸುಡಾನ್ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರ್ಪೋರಲ್ ಯುವರಾಜ್ ಸಿಂಗ್, ದಕ್ಷಿಣ ಸುಡಾನ್ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ನಾಗರಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಐವನ್ ಮೈಕೆಲ್ ಪಿಕಾರ್ಡೊ ಮತ್ತು ಇರಾಕ್ನಲ್ಲಿ ವಿಶ್ವಸಂಸ್ಥೆಯ ಕಚೇರಿಯಲ್ಲಿ ನಾಗರಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮೂಲಚಂದ್ ಯಾದವ್ ರನ್ನು ಆನ್ಲೈನ್ ಸಮಾರಂಭದಲ್ಲಿ ಮರಣೋತ್ತರವಾಗಿ ಗೌರವಿಸಲಾಯಿತು.
ಅಂತರ್ರಾಷ್ಟ್ರೀಯ ವಿಶ್ವಸಂಸ್ಥೆಯ ಶಾಂತಿಪಾಲಕರ ದಿನದ ಸಂದರ್ಭದಲ್ಲಿ ಅವರಿಗೆ ಮರಣೋತ್ತರ ಡಾಗ್ ಹಾಮರ್ಸ್ಕ್ಯೋಲ್ಡ್ ಪದಕವನ್ನು ಪ್ರದಾನ ಮಾಡಲಾಯಿತು.