ಬ್ಯಾಂಕಾಕ್: ಪ್ರತಿಭಟನಾ ರ್ಯಾಲಿ ಸಂದರ್ಭ ಘರ್ಷಣೆ
ರಬ್ಬರ್ ಬುಲೆಟ್ ಪ್ರಯೋಗ; 3 ಮಂದಿಗೆ ಗಾಯ
ಬ್ಯಾಂಕಾಕ್, ಆ.14: ಥೈಲ್ಯಾಂಡ್ನಲ್ಲಿ ಕೊರೋನ ಸೋಂಕು ತೀವ್ರಗತಿಯಲ್ಲಿ ಉಲ್ಬಣಗೊಳ್ಳುತ್ತಿದ್ದು ಇದಕ್ಕೆ ಸರಕಾರದ ಅಸಮರ್ಪಕ ನಿರ್ವಹಣೆ ಕಾರಣ ಎಂದು ಆರೋಪಿಸಿ ಪ್ರಧಾನಿ ವಿರುದ್ಧ ಬ್ಯಾಂಕಾಕ್ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ರ್ಯಾಲಿಯನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಬುಲೆಟ್ ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ.
ಕೊರೋನ ಹಿನ್ನೆಲೆಯಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಮೀರಿ ಬ್ಯಾಂಕಾಕ್ನ ವಿಕ್ಟರಿ ಪ್ರತಿಮೆಯ ಎದುರು ಗುಂಪುಗೂಡಿದ ಪ್ರತಿಭಟನಾಕಾರರು ಹಣ್ಣು ಹಂಪಲು ತುಂಬಿದ್ದ ಬುಟ್ಟಿಗಳಿಗೆ ಬೆಂಕಿ ಹಚ್ಚುವ ಮೂಲಕ ರೈತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಸಾಂಕೇತಿಕವಾಗಿ ಬಿಂಬಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರ ಬಲಪ್ರಯೋಗಿಸಿದ್ದರಿಂದ 3 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಥೈಲ್ಯಾಂಡಿನಲ್ಲಿ ಈಗ ಪ್ರತೀ ದಿನ ಸರಾಸರಿ 23,418 ಹೊಸ ಸೋಂಕು ಪ್ರಕರಣ ದಾಖಲಾಗುತ್ತಿದೆ. ಪ್ರಧಾನಿ ಪ್ರಯೂಥ್ ಚಾನ್-ಒಚಾ ಅವರು ಸೋಂಕು ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸದ ಕಾರಣ ಕೊರೋನ ತೀವ್ರಗತಿಯಲ್ಲಿ ಹರಡುತ್ತಿದೆ ಎಂದು ಆರೋಪಿಸಿ ಈ ವಾರದಲ್ಲಿ 3ನೇ ಬಾರಿ ಬ್ಯಾಂಕಾಕ್ ನಲ್ಲಿ ಪ್ರತಿಭಟನೆ ನಡೆದಿದೆ.
ಥೈಲ್ಯಾಂಡಿನಲ್ಲಿ ಒಟ್ಟು ಸೋಂಕಿತರ ಪ್ರಮಾಣ 9 ಲಕ್ಷಕ್ಕೇರಿದ್ದು 7,300 ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ ಮಾಜಿ ಪ್ರಧಾನಿ ದಿವಂಗತ ಛತಿಛಾಯ್ ಚೂನ್ಹವನ್ ಅವರ ಪತ್ನಿ ಥನ್ಪುಯಿಂಗ್ ಚೂನ್ಹವನ್ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಲಸಿಕೀಕರಣ ಪ್ರಕ್ರಿಯೆ ಹಾಗೂ ನಿಬರ್ಂಧಗಳಿಂದಾಗಿ ಎದುರಾಗಿರುವ ಆರ್ಥಿಕ ಸಂಕಷ್ಟಗಳಿಂದ ಪ್ರಧಾನಿ ಒಚಾ ತೀವ್ರ ಒತ್ತಡ ಮತ್ತು ಟೀಕೆಗೆ ಗುರಿಯಾಗಿದ್ದಾರೆ.