ಬಾಂಗ್ಲಾ: ಕೋಮು ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯ ತಪ್ಪೊಪ್ಪಿಗೆ
ಢಾಕಾ, ಅ.25: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆದಿದ್ದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಮತ್ತವನ ಸಹಚರ ವಿಚಾರಣೆಯ ಸಂದರ್ಭ ತಪ್ಪೊಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದುರ್ಗಾಪೂಜೆಯ ಸಂದರ್ಭ ತಾನು ಫೇಸ್ಬುಕ್ನಲ್ಲಿ ಮಾಡಿದ್ದ ಪೋಸ್ಟ್ನಿಂದ ಪೀರ್ಗಂಜ್ ಉಪಜಿಲ್ಲೆಯ ರಂಗ್ಪುರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ದೊರಕಿದೆ ಎಂದು ಪ್ರಮುಖ ಆರೋಪಿ ಶೈಕತ್ ಮಂಡಲ್ ರವಿವಾರ ಮ್ಯಾಜಿಸ್ಟ್ರೇಟ್ ಎದುರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ಹಿಂಸಾಚಾರದಲ್ಲಿ ತನ್ನ ಮತ್ತು ಸಹಚರ ರಬೀಬುಲ್ ಇಸ್ಲಾಮ್ನ ಪಾತ್ರವಿರುವುದಾಗಿ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇವರಿಬ್ಬರನ್ನೂ ಶುಕ್ರವಾರ ಗಾಝಿಪುರದಲ್ಲಿ ಬಂಧಿಸಿ ಡಿಜಿಟಲ್ ಸೆಕ್ಯುರಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿಯಾಗಿರುವ ಮಂಡಲ್ನನ್ನು ಆಡಳಿತಾರೂಢ ಅವಾಮಿ ಲೀಗ್ನ ವಿದ್ಯಾರ್ಥಿ ಮೋರ್ಛಾದ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ.
ಮಂಡಲ್ ಸಾಮಾಜಿಕ ಮಾಧ್ಯಮದ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದರೆ, ರಬೀಬುಲ್ ಲೌಡ್ಸ್ಫೀಕರ್ ಮೂಲಕ ಘೋಷಣೆ ಕೂಗಿ ಹಿಂಸೆಗೆ ಪ್ರಚೋದನೆ ನೀಡಿದ್ದು ಇವರಿಬ್ಬರೂ ಈ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯದ ಹೇಳಿಕೆ ತಿಳಿಸಿದೆ.