ಬಾಂಗ್ಲಾ: ಪಾಕ್ ವಿರುದ್ಧದ ಯುದ್ಧ ಗೆಲುವಿನ 50ನೇ ವರ್ಷಾಚರಣೆ
Photo : PTI
ಢಾಕಾ, ಡಿ.16: 1971ರಲ್ಲಿ ಪಾಕಿಸ್ತಾನ ಎದುರಿಗಿನ ಯುದ್ಧದಲ್ಲಿ ಗೆಲುವು ಸಾಧಿಸಿ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿದ ಬಾಂಗ್ಲಾದೇಶ ಈ ಗೆಲುವಿನ 50ನೇ ವರ್ಷಾಚರಣೆಯ ಸಂಭ್ರಮೋತ್ಸವವನ್ನು ಸೇನಾಪಡೆಯ ಪರೇಡ್ ನೊಂದಿಗೆ ಗುರುವಾರ ಆಚರಿಸಿದೆ.
ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಢಾಕಾ ಹಾಗೂ ಇತರ ಪ್ರಮುಖ ನಗರಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ ಜನತೆ, 1971ರಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮರಣ ಹೊಂದಿದ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಯುದ್ಧದಲ್ಲಿ ಮೃತಪಟ್ಟ ಯೋಧರ ಗೌರವಾರ್ಥ ಢಾಕಾದ ಬಳಿ ನಿರ್ಮಿಸಲಾದ ರಾಷ್ಟ್ರೀಯ ಸ್ಮಾರಕ ಸ್ಥಳವನ್ನು ಸಂದರ್ಶಿಸಿದ ಸಾವಿರಾರು ಜನ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಹಲವೆಡೆ ಗಾಯಕರಿಂದ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವಿತ್ತು. ದೇಶದ ಧ್ವಜದ ಬಣ್ಣವನ್ನು ಸಂಕೇತಿಸುವ ಹಸಿರು ಮತ್ತು ಕೆಂಪು ಬಣ್ಣದ ಸೀರೆಯುಟ್ಟ ಮಹಿಳೆಯರು ರ್ಯಾಲಿಗಳಲ್ಲಿ ಪಾಲ್ಗೊಂಡರು.
ಸ್ವಾತಂತ್ರ್ಯಕ್ಕಾಗಿ ಬಾಂಗ್ಲಾದೇಶ ಪಾಕಿಸ್ತಾನದೊಂದಿಗೆ ನಡೆಸಿದ ಯುದ್ಧ 9 ತಿಂಗಳು ನಡೆದಿದ್ದು ಸುಮಾರು 3 ಮಿಲಿಯ ಜನತೆ ಮೃತರಾಗಿದ್ದರು. ಅಂತಿಮವಾಗಿ ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಬಾಂಗ್ಲಾದೇಶದ ಪರ ಭಾರತದ ಸೇನೆಯನ್ನು ರವಾನಿಸಿದರು. 1971ರ ಡಿಸೆಂಬರ್ 16ರಂದು ಭಾರತ-ಬಾಂಗ್ಲಾ ಜಂಟಿ ಪಡೆಯೆದುರು ಪಾಕಿಸ್ತಾನದ ಸೇನೆ ಸೋಲೊಪ್ಪಿಕೊಳ್ಳುವುದರೊಂದಿಗೆ ಬಾಂಗ್ಲಾದೇಶವು ಸ್ವಾತಂತ್ರ್ಯದೇಶವಾಗಿ ಅಸ್ತಿತ್ವಕ್ಕೆ ಬಂದಿತು. ಈಗಿನ ಪ್ರಧಾನಿ ಶೇಖ್ ಹಸೀನಾರ ತಂದೆ ಶೇಖ್ ಮುಜಿಬುರ್ ರಹ್ಮಾನ್ ದೇಶದ ಮೊದಲ ಮುಖಂಡರಾಗಿ ಆಡಳಿತ ನಡೆಸಿದರು.