ಸಂಧಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಪೋಪ್ ಗೆ ಮನವಿ: ಉಕ್ರೇನ್
ಕೀವ್, ಮಾ.22: ಉಕ್ರೇನ್ ಮೇಲೆ ರಶ್ಯದ ಆಕ್ರಮಣದ ಬಳಿಕ ದೇಶದಲ್ಲಿ ನೆಲೆಸಿರುವ ಕಠಿಣ ಪರಿಸ್ಥಿತಿ, ರಶ್ಯದ ಮುತ್ತಿಗೆಯ ಬಳಿಕ ಉಂಟಾಗಿರುವ ಮಾನವೀಯ ಬಿಕ್ಕಟ್ಟಿನ ಸ್ಥಿತಿಗತಿಯ ಬಗ್ಗೆ ಪೋಪ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಸುಮಾರು 1 ತಿಂಗಳಿಂದ ನಡೆಯುತ್ತಿರುವ ರಶ್ಯದ ದಾಳಿಯಿಂದ ದೇಶದಲ್ಲಿನ ಜನರಿಗೆ ಅಪಾರ ಸಂಕಷ್ಟವಾಗುತ್ತಿದ್ದು ಈ ಪರಿಸ್ಥಿತಿಯನ್ನು ಅಂತ್ಯಗೊಳಿಸಲು ಸಂಧಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವಂತೆ ಪೋಪ್ ಅವರನ್ನು ವಿನಂತಿಸಿರುವುದಾಗಿ ಅವರು ಹೇಳಿದ್ದಾರೆ.
ಉಕ್ರೇನ್ನಲ್ಲಿನ ಬಿಕ್ಕಟ್ಟು ಅಂತ್ಯಗೊಳ್ಳಬೇಕು ಎಂದು ಕಳೆದ ವಾರ ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದರು. ಉಕ್ರೇನ್ನಲ್ಲಿ ನಡೆಯುತ್ತಿರುವ ‘ಹತ್ಯಾಕಾಂಡ’ ವನ್ನು ಅವರು ಖಂಡಿಸಿದ್ದರೂ ರಶ್ಯದ ಹೆಸರನ್ನು ಉಲ್ಲೇಖಿಸಿರಲಿಲ್ಲ. ಶಾಂತಿ ಮಾತುಕತೆಯ ಮೂಲಕವೇ ಈ ಬಿಕ್ಕಟ್ಟಿಗೆ ಪರಿಹಾರ ಸಾಧ್ಯ ಎಂದು ಪೋಪ್ ಫ್ರಾನ್ಸಿಸ್ ಹಾಗೂ ರಶ್ಯದ ಆರ್ಥಡಾಕ್ಸ್ ಚರ್ಚ್ ನ ಪ್ರಧಾನ ಧರ್ಮಗುರು ಕರೆ ನೀಡಿದ್ದರು.
Next Story