ನೆದರ್ಲ್ಯಾಂಡ್ನ ಸೆಂಟ್ರಲ್ ಬ್ಯಾಂಕ್ ಕ್ಷಮೆಯಾಚನೆ
ಆಮ್ಸ್ಟರ್ಡಾಂ, ಜು.1: ಈ ಹಿಂದೆ ಗುಲಾಮರ ವ್ಯಾಪಾರದಲ್ಲಿ ಸಂಪರ್ಕ ಹೊಂದಿದ್ದಕ್ಕೆ ಕ್ಷಮೆ ಯಾಚಿಸುವುದಾಗಿ ನೆದರ್ಲ್ಯಾಂಡ್ನ ಸೆಂಟ್ರಲ್ ಬ್ಯಾಂಕ್ ಶುಕ್ರವಾರ ಹೇಳಿದೆ. ನೆದರ್ಲ್ಯಾಂಡ್ನ ರಾಷ್ಟ್ರೀಯ ದಿನಾಚರಣೆ ಸಂದರ್ಭ ಡೆ ನೆದರ್ಲ್ಯಾಂಡ್ಶೆ ಬ್ಯಾಂಕ್ 19ನೇ ಶತಮಾನದಲ್ಲಿ ಸಕ್ರಿಯವಾಗಿದ್ದ ಗುಲಾಮರ ವ್ಯಾಪಾರದಲ್ಲಿ ಸಂಸ್ಥೆ ಶಾಮೀಲಾಗಿದ್ದ ಬಗ್ಗೆ ಕ್ಷಮೆ ಯಾಚಿಸುವುದಾಗಿ ಹೇಳಿದೆ.
ನೆದರ್ಲ್ಯಾಂಡ್ನಲ್ಲಿ ಗುಲಾಮಗಿರಿ ಪದ್ಧತಿಗೆ ನಿಷೇಧ ಹೇರಿದ ದಿನವನ್ನು ರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತದೆ. 1814ರಿಂದ 1863ರ ಅವಧಿಯಲ್ಲಿ ಅಟ್ಲಾಂಟಿಕ್ ದೇಶಗಳ ನಡುವೆ ಸಕ್ರಿಯವಾಗಿದ್ದ ಗುಲಾಮರ ವ್ಯಾಪಾರ ಪ್ರಕ್ರಿಯೆಯಲ್ಲಿ ಬ್ಯಾಂಕ್ ಶಾಮೀಲಾಗಿತ್ತು ಮತ್ತು ದೇಶದಲ್ಲಿ ಗುಲಾಮಗಿರಿಯನ್ನು ನಿಷೇಧಿಸಿದ ಬಳಿಕ ಎಸ್ಟೇಟ್ನ ಮಾಲಕರಿಗೆ ಪರಿಹಾರವನ್ನೂ ನೀಡಿತ್ತು.
ಈ ಖಂಡನೀಯ ಸತ್ಯಗಳಿಗಾಗಿ ನಾನಿಂದು ಸೆಂಟ್ರಲ್ ಬ್ಯಾಂಕ್ನ ಪರವಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ನನ್ನ ಪೂರ್ವಾಧಿಕಾರಿಗಳು ಸೇರಿದಂತೆ, ಹಲವರ ವೈಯಕ್ತಿಕ ಆಯ್ಕೆಗಳಿಗಾಗಿ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಬ್ಯಾಂಕ್ನ ಅಧ್ಯಕ್ಷ ಕ್ಲಾಸ್ ನಾಟ್ ಆಮ್ಸ್ಟರ್ಡಾಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು. 19ನೇ ಶತಮಾನದ ಗುಲಾಮಗಿರಿಯ ಸಮಕಾಲೀನ ಋಣಾತ್ಮಕ ಪರಿಣಾಮವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಯೋಜನೆಗೆ 5.2 ಮಿಲಿಯನ್ ಡಾಲರ್ ಮೊತ್ತದ ನಿಧಿಯನ್ನು ರೂಪಿಸುವ ಸರಣಿ ಉಪಕ್ರಮಗಳನ್ನು ಬ್ಯಾಂಕ್ ಇದೇ ಸಂದರ್ಭ ಘೋಷಿಸಿದೆ. ಗುಲಾಮಗಿರಿಯಲ್ಲಿ ನೆದರ್ಲ್ಯಾಂಡ್ನ ರಾಜಧಾನಿಯ ಪಾತ್ರಕ್ಕಾಗಿ ಕಳೆದ ವರ್ಷ ಇದೇ ಸಂದರ್ಭ ಆಮ್ಸ್ಟರ್ಡಾಂನ ಮೇಯರ್ ಕ್ಷಮೆ ಯಾಚಿಸಿದ್ದರು.