ಶ್ರೀಲಂಕಾದಲ್ಲಿ ಭಾರತೀಯನ ಮೇಲೆ ಹಲ್ಲೆ
ಕೊಲಂಬೊ, ಜು.20: ಶ್ರೀಲಂಕಾ ರಾಜಧಾನಿ ಕೊಲಂಬೋದ ಬಳಿಕ ಮಂಗಳವಾರ ರಾತ್ರಿ ಭಾರತೀಯ ನಾಗರಿಕನ ಮೇಲೆ ಅಪ್ರಚೋದಿತ ದಾಳಿ ಮತ್ತು ಹಲ್ಲೆ ನಡೆದಿದ್ದು ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತೀಯರು ಮತ್ತು ಪ್ರಯಾಣ ಮತ್ತು ಚಟುವಟಿಕೆ ಸಂದರ್ಭ ಗರಿಷ್ಟ ಜಾಗೃತೆ ವಹಿಸಬೇಕು ಎಂದು ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಸೂಚಿಸಿದೆ. ಶ್ರೀಲಂಕಾದಲ್ಲಿ ಸರಕಾರ ವಿರೋಧಿ ಪ್ರತಿಭಟನೆ ತೀವ್ರಗೊಂಡಿದ್ದು, ಬುಧವಾರ ಸಂಸತ್ತಿನಲ್ಲಿ ನಡೆಯುವ ಅಧ್ಯಕ್ಷರ ಹುದ್ದೆಯ ಚುನಾವಣೆ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ.
ಮಂಗಳವಾರ ರಾತ್ರಿ ವಿವೇಕ್ ವರ್ಮ ಎಂಬವರ ಮೇಲೆ ಅಪ್ರಚೋದಿತ ಹಲ್ಲೆ ನಡೆಸಲಾಗಿದೆ. ಭಾರತೀಯ ಪ್ರಜೆಯಾಗಿರುವ ಇವರು ಇಂಡಿಯನ್ ವೀಸಾ ಸೆಂಟರ್ನ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಹಲ್ಲೆ ಘಟನೆಯನ್ನು ಶ್ರೀಲಂಕಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹೈಕಮಿಷನ್ ಟ್ವೀಟ್ ಮಾಡಿದೆ. ಭಾರತ-ಶ್ರೀಲಂಕಾ ಜನರ ನಡುವಿನ ಸಂಬಂಧ ಯಾವತ್ತೂ ಸೌಹಾರ್ದಯುತ ಮತ್ತು ಸ್ನೇಹಭಾವದಿಂದ ಕೂಡಿದೆ.
ಈಗಿನ ಪರಿಸ್ಥಿತಿಯಲ್ಲಿ ಶ್ರೀಲಂಕಾದಲ್ಲಿರುವ ಭಾರತೀಯ ಪ್ರಜೆಗಳು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಗಮನ ಹರಿಸಿ ತಮ್ಮ ಪ್ರಯಾಣದ ಬಗ್ಗೆ ನಿರ್ಧರಿಸಬೇಕು. ಅಗತ್ಯಬಿದ್ದರೆ ತಮ್ಮನ್ನು ಸಂಪರ್ಕಿಸಬಹುದು’ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.