ಶ್ರೀಲಂಕಾ: ಪ್ರತಿಭಟನಾ ಶಿಬಿರದ ಮೇಲೆ ಭದ್ರತಾ ಪಡೆ ದಾಳಿ; ಹಲವರಿಗೆ ಗಾಯ
ಹೊಸದಿಲ್ಲಿ, ಜು.22: ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಸರಕಾರಿ ಜಮೀನಿನ ಮೇಲೆ ಪ್ರತಿಭಟನಾಕಾರರು ನಿರ್ಮಿಸಿದ ಶಿಬಿರದ ಮೇಲೆ ಶುಕ್ರವಾರ ಭದ್ರತಾ ಪಡೆಗಳು ದಾಳಿ ನಡೆಸಿ ಹಲವರನ್ನು ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ. ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಭದ್ರತಾ ಪಡೆಗಳು ಸರಕಾರ ವಿರೋಧಿ ಪ್ರತಿಭಟನಾಕಾರರ ಮೇಲೆ ಮುಗಿಬಿದ್ದಿವೆ. ಶುಕ್ರವಾರ ಬೆಳಿಗ್ಗೆ ಬೆಳಿಗ್ಗೆ ಅಸಾಲ್ಟ್ ರೈಫಲ್ಸ್ ಶಸ್ತ್ರಸಜ್ಜಿತ ಯೋಧರು ರಾಜಧಾನಿಯಲ್ಲಿ ಕಳೆದ ಎಪ್ರಿಲ್ನಿಂದ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಟೆಂಟ್ಗೆ ನುಗ್ಗಿ ಟೆಂಟನ್ನು ಹರಿದೆಸೆಯುವ ವೀಡಿಯೊವನ್ನು ಮಾಧ್ಯಮಗಳು ಪ್ರಸಾರ ಮಾಡಿವೆ.
ಪ್ರತಿಭಟನಾಕಾರರು ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದ್ದ ಅಧ್ಯಕ್ಷರ ಕಾರ್ಯಾಲಯವನ್ನು ಮರಳಿ ಪಡೆಯಲು ಪೊಲೀಸರು ಹಾಗೂ ವಿಶೇಷ ಭದ್ರತಾ ತಂಡವು ಶುಕ್ರವಾರ ಮುಂಜಾನೆ ಜಂಟಿ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆ ಸಂದರ್ಭ ಗಾಯಗೊಂಡ ಇಬ್ಬರ ಸಹಿತ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ನಳಿನ್ ಥಲ್ದುವರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಪದಚ್ಯುತ ಅಧ್ಯಕ್ಷ ಗೊತಬಯ ರಾಜಪಕ್ಸರಿಗೆ ನಿಕಟವಾಗಿರುವ ವಿಕ್ರಮಸಿಂಘೆ ಆಡಳಿತದಲ್ಲಿ ದಮನಕಾರಿ ಉಪಕ್ರಮವನ್ನು ತಾವು ನಿರೀಕ್ಷಿಸಿದ್ದೆವು.
‘ಗೊತ ಗೋ ಗಾಮ’ ಪ್ರತಿಭಟನಾ ಶಿಬಿರಕ್ಕೆ ಗುರುವಾರ ಮಧ್ಯರಾತ್ರಿಯ ಬಳಿಕ ನುಗ್ಗಿದ ನೂರಾರು ಭದ್ರತಾ ಸಿಬಂದಿ,ಟೆಂಟ್ನ ಒಂದು ವಿಭಾಗವನ್ನು ತೆರವುಗೊಳಿಸಿದರು. ಬೆಳಿಗ್ಗೆ ಮತ್ತಷ್ಟು ಯೋಧರು ಈ ಪ್ರದೇಶಕ್ಕೆ ಆಗಮಿಸಿ ಇಲ್ಲಿದ್ದ ಹಲವು ಶಿಬಿರಗಳನ್ನು ಸುತ್ತುವರಿದರು. ಈ ಸಂದರ್ಭ ನಡೆದ ಘರ್ಷಣೆಯಲಿ ಕನಿಷ್ಟ 50 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಹಲವು ಪತ್ರಕರ್ತರನ್ನೂ ಥಳಿಸಲಾಗಿದೆ ಎಂದು ಪ್ರತಿಭಟನೆಯ ಆಯೋಜಕರು ಹೇಳಿದ್ದಾರೆ.
ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಆಸ್ಪತ್ರೆಯ ಮೂಲಗಳು ಹೇಳಿವೆ. ಅಧ್ಯಕ್ಷರ ಕಾರ್ಯಾಲಯದ ಆವರಣದಲ್ಲಿದ್ದ ಪ್ರತಿಭಟನಾಕಾರರ ಶಿಬಿರನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬಂದಿ ಟೆಂಟ್ಗಳನ್ನು ಕಿತ್ತೆಸೆದು ಪ್ರತಿಭಟನಾಕಾರರನ್ನು ಥಳಿಸಿದ್ದಾರೆ ಎಂದು ಪ್ರತಿಭಟನೆಯ ಸಂಘಟಕ ಮಂಜುಳಾ ಸಮರಶೇಕರ ಹೇಳಿದ್ದಾರೆ.
ಅಧ್ಯಕ್ಷರ ಕಾರ್ಯಾಲಯ ಸಂಕೀರ್ಣದಲ್ಲಿ ಅಧ್ಯಕ್ಷರ ಮತ್ತು ಪ್ರಧಾನಿಯ ಸರಕಾರಿ ನಿವಾಸ ಸಹಿತ ಹಲವು ಕಟ್ಟಡಗಳಿವೆ. ಈ ತಿಂಗಳ ಆರಂಭದಲ್ಲಿ ಕಾರ್ಯಾಲಯಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಅಧ್ಯಕ್ಷರ ಮತ್ತು ಪ್ರಧಾನಿಯ ನಿವಾಸಕ್ಕೆ ನುಗ್ಗಿದ್ದರು. ಬಳಿಕ ಅಲ್ಲಿಂದ ಹಿಂದಕ್ಕೆ ಸರಿದಿದ್ದರೂ, ಸಂಕೀರ್ಣದಲ್ಲಿದ್ದ ಟೆಂಟ್ಗಳನ್ನು ಪ್ರತಿಭಟನೆ ಮುಂದುವರಿಸಿದ್ದರು. ಇದೀಗ ಕಾರ್ಯಾಲಯ ಸಂಪೂರ್ಣವಾಗಿ ಸರಕಾರದ ನಿಯಂತ್ರಣಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.
ಅಧ್ಯಕ್ಷರ ಕಾರ್ಯಾಲಯವನ್ನು ಸರಕಾರಿ ಅಧಿಕಾರಿಗಳಿಗೆ ಶುಕ್ರವಾರ ಮಧ್ಯಾಹ್ನ ಹಸ್ತಾಂತರಿಸಲು ನಿರ್ಧರಿಸಿದ್ದೆವು ಎಂದು ಪ್ರತಿಭಟನೆಯ ಸಂಯೋಜಕ ಚಮೀರಾ ದೆದ್ದುವಗೆ ಹೇಳಿದ್ದಾರೆ. ಆದರೆ ತಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಕಾರ್ಯಾಲಯವನ್ನು ಬಿಟ್ಟು ತೆರಳುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದ್ದರೂ ಸರಕಾರ ಅತಿಯಾದ ಬಲ ಮತ್ತು ಹಿಂಸಾಚಾರದ ಕ್ರಮ ಕೈಗೊಂಡಿರುವುದು ಈ ಸಂದರ್ಭಕ್ಕೆ ಸೂಕ್ತವಾಗಿರಲಿಲ್ಲ ಎಂದು ‘ಸೆಂಟರ್ ಫಾರ್ ಪಾಲಿಸಿ ಆಲ್ಟರ್ನೇಟಿವ್’ ವೇದಿಕೆಯ ಅಧಿಕಾರಿ ಭವಾನಿ ಫೊನ್ಸೆಕಾ ಹೇಳಿದ್ದಾರೆ.
ಶುಕ್ರವಾರ ಸ್ಥಳದಿಂದ ತೆರಳುವುದಾಗಿ ಹೇಳಿದ್ದರೂ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆ ಹೇಡಿತನದ ಹಲ್ಲೆ ನಡೆಸಿದೆ. ಅಹಂಕಾರ ಮತ್ತು ವಿವೇಚನಾರಹಿತ ಶಕ್ತಿಯ ಅನುಪಯುಕ್ತ ಪ್ರದರ್ಶನವು ಮುಗ್ಧ, ಅಮಾಯಕ ಜೀವಗಳನ್ನು ಅಪಾಯಕ್ಕೆ ತಳ್ಳುತ್ತದೆ ಮತ್ತು ದೇಶದಇಮೇಜ್ಗೆ ಘಾಸಿ ಮಾಡಿದೆ ಎಂದು ಶ್ರೀಲಂಕಾದ ವಿಪಕ್ಷ ಮುಖಂಡ ಸಜಿತ್ ಪ್ರೇಮದಾಸ ಖಂಡಿಸಿದ್ದಾರೆ. ಶ್ರೀಲಂಕಾದಲ್ಲಿ ಸೋಮವಾರದಿಂದ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಇದು ಪ್ರತಿಭಟನೆಯ ಹಕ್ಕನ್ನು ನಿರ್ಬಂಧಿಸುವ ಕಾರಣ ಪ್ರತಿಭಟನಾಕಾರರನ್ನು ಬಂಧಿಸಲು ಭದ್ರತಾ ಪಡೆಗೆ ವ್ಯಾಪಕ ಅಧಿಕಾರ ನೀಡುತ್ತದೆ.
ಶ್ರೀಲಂಕಾ ಭದ್ರತಾ ಪಡೆಯ ಕಾರ್ಯಾಚರಣೆಗೆ ವಾಪಕ ಖಂಡನೆ
ಶ್ರೀಲಂಕಾದ ಅಧ್ಯಕ್ಷರ ಕಾರ್ಯಾಲಯ ಸಂಕೀರ್ಣದಿಂದ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಶ್ರೀಲಂಕಾದ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಗೆ ವ್ಯಾಪಕ ಖಂಡನೆ ಮತ್ತು ಟೀಕೆ ವ್ಯಕ್ತವಾಗಿದೆ. ಈ ದಮನಕಾರಿ ಕೃತ್ಯವು ದೇಶವನ್ನು ಮತ್ತಷ್ಟು ಅಸ್ತಿರಗೊಳಿಸಲಿದೆ ಎಂದು ಬಾರ್ ಅಸೋಸಿಯೇಷನ್ ಆಫ್ ಶ್ರೀಲಂಕಾ (ವಕೀಲರ ಸಂಘಟನೆ) ಖಂಡಿಸಿದೆ.
ನೂತನ ಅಧ್ಯಕ್ಷರ ಆಡಳಿತದ ಮೊದಲ ದಿನವೇ ನಾಗರಿಕರ ಪ್ರತಿಭಟನೆಯನ್ನು ಹತ್ತಿಕ್ಕಲು ಸಶಸ್ತ್ರ ಪಡೆಯನ್ನು ಬಳಸಿರುವುದು ಹೇಯ ಕೃತ್ಯವಾಗಿದ್ದು ಇದು ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿರತೆಯ ಮೇಲೆ ಪರಿಣಾಮ ಬೀರಲಿದೆ ಎಂದು ವಕೀಲರ ಸಂಘಟನೆಯ ಹೇಳಿಕೆ ತಿಳಿಸಿದೆ.
ಅಧಿಕಾರಿಗಳು ಸಂಯಮ ವಹಿಸಬೇಕು ಮತ್ತು ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ನೆರವು ಒದಗಿಸಬೇಕು ಎಂದು ಶ್ರೀಲಂಕಾದಲ್ಲಿನ ಅಮೆರಿಕದ ರಾಯಭಾರಿ ಜೂಲಿ ಚಂಗ್ ಆಗ್ರಹಿಸಿದ್ದಾರೆ.