ಪ್ರಜಾಪ್ರಭುತ್ವವನ್ನು ತಕ್ಷಣ ಹಳಿಗೆ ತನ್ನಿ : ಮ್ಯಾನ್ಮಾರ್ ಸೇನಾಡಳಿತಕ್ಕೆ ವಿಶ್ವಸಂಸ್ಥೆ ಆಗ್ರಹ
ವಿಶ್ವಸಂಸ್ಥೆ, ನ.12: ಮ್ಯಾನ್ಮಾರ್(Myanmar)ನಲ್ಲಿ ತಕ್ಷಣ ಪ್ರಜಾಪ್ರಭುತ್ವವನ್ನು ಪುನರಾರಂಭಿಸಬೇಕು ಎಂದು ವಿಶ್ವಸಂಸ್ಥೆ(WHO)ಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್(Antonio Guterres) ಆಗ್ರಹಿಸಿದ್ದು, ದೇಶವನ್ನು ಆವರಿಸಿರುವ ದುಃಸ್ವಪ್ನವನ್ನು ತಡೆಯುವ ಏಕೈಕ ಮಾರ್ಗ ಇದಾಗಿದೆ ಎಂದಿದ್ದಾರೆ.
ಕಳೆದ ವರ್ಷದ ಫೆಬ್ರವರಿಯಲ್ಲಿ ಆಂಗ್ ಸಾನ್ಸೂಕಿ(Aung San Suu Kyi) ನೇತೃತ್ವದ ಸರಕಾರವನ್ನು ಕ್ಷಿಪ್ರಕ್ರಾಂತಿಯಲ್ಲಿ ಸೇನೆ ಪದಚ್ಯುತಗೊಳಿಸಿದಂದಿನಿಂದ ಮ್ಯಾನ್ಮಾರ್ನಲ್ಲಿ ಮಾರಣಾಂತಿಕ ಸಂಘರ್ಷ ಭುಗಿಲೆದ್ದಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಸೇನಾಡಳಿತ ನಡೆಸಿದ ಕಾರ್ಯಾಚರಣೆಯಲ್ಲಿ ಸಾವಿರಾರು ಮಂದಿ ಹತರಾಗಿದ್ದಾರೆ. ಇದೀಗ ಕಾಂಬೋಡಿಯಾದಲ್ಲಿ ನಡೆಯುತ್ತಿರುವ ಆಗ್ನೇಯ ಏಶ್ಯಾ ರಾಷ್ಟ್ರಗಳ ಸಂಘಟನೆ( ಆಸಿಯಾನ್)ಯ ಶೃಂಗಸಭೆಯ ನೇಪಥ್ಯದಲ್ಲಿ ಸುದ್ಧಿಗಾರರ ಜತೆ ಮಾತನಾಡಿದ ಗುಟೆರಸ್ , ಮ್ಯಾನ್ಮಾರ್ನಲ್ಲಿನ ಪರಿಸ್ಥಿತಿಯು ಜನರಿಗೆ ಅಂತ್ಯವಿಲ್ಲದ ದುಃಸ್ವಪ್ನವಾಗಿದೆ ಮತ್ತು ಪ್ರದೇಶಾದ್ಯಂತ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯಾಗಿದೆ ಎಂದರು.
ಸೇನಾಡಳಿತ ತಮ್ಮ ಜನರ ಅಭಿಪ್ರಾಯವನ್ನು ಆಲಿಸಬೇಕು, ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರಳಿ ಹಳಿಗೆ ತರಬೇಕಾಗಿದೆ. ಶಾಂತಿ ಮತ್ತು ಸ್ಥಿರತೆಗೆ ಇದು ಏಕೈಕ ಮಾರ್ಗವಾಗಿದೆ. ನಾಗರಿಕರ ಮೇಲಿನ ವಿವೇಚನಾರಹಿತ ದಾಳಿಗಳು ಭಯಾನಕ ಮತ್ತು ಹೃದಯ ವಿದ್ರಾವಕವಾಗಿದೆ ಎಂದು ಗುಟೆರಸ್ ಹೇಳಿದ್ದಾರೆ.
ಮ್ಯಾನ್ಮಾರ್ನಲ್ಲಿರುವ ಅವ್ಯವಸ್ಥೆ, ಗೊಂದಲ ನಿವಾರಣೆಗಾಗಿ ಕಳೆದ ಎಪ್ರಿಲ್ನಲ್ಲಿ ಅಲ್ಲಿನ ಸೇನಾಡಳಿತದ ಒಪ್ಪಿರುವ ಐದು ಅಂಶದ ಕಾರ್ಯಕ್ರಮ ಇದುವರೆಗೂ ಜಾರಿಗೆ ಬಂದಿಲ್ಲ ಎಂದು ಗುಟೆರಸ್ ಅಸಮಾಧಾನ ಸೂಚಿಸಿದರು.