ತೇಜೋವದೆ ಆರೋಪ: ಭಾಸ್ಕರ್ ಪ್ರಸಾದ್ ಬಂಧನ
ಬೆಂಗಳೂರು, ಜೂ.6: ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಕೊಲೆ ಸುಪಾರಿ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೇಜೋವದೆ ಮಾಡಿದ ಆರೋಪದಲ್ಲಿ ಭಾಸ್ಕರ್ ಪ್ರಸಾದ್ ಅವರನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಂಕಣಕಾರ ರೋಹಿತ್ ಚಕ್ರತೀರ್ಥ ಅವರನ್ನು ಕೊಲೆ ಮಾಡಲು, ಸುಪಾರಿ ನೀಡಿರುವುದಾಗಿ ಭಾಸ್ಕರ್ ಪ್ರಸಾದ್ ಫೇಸ್ಬುಕ್ನಲ್ಲಿ ಬರೆದಿದ್ದರು. ಈ ಸಂಬಂಧ ದಿನೇಶ್ ಅಮೀನ್ ಮಟ್ಟು ಪೊಲೀಸರಿಗೆ ದೂರು ನೀಡಿದ್ದರು.
ದೂರಿನನ್ವಯ ಭಾಸ್ಕರ್ ಪ್ರಸಾದ್ ಅವರನ್ನು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. ಈ ವೇಳೆ ಭಾಸ್ಕರ್ ತನ್ನ ಆರೋಗ್ಯ ಏರುಪೇರಾಗುತ್ತಿದ್ದು, ಕಡಿಮೆ ರಕ್ತದೊತ್ತಡದ ಸಮಸ್ಯೆ ಇರುವುದಾಗಿ ಹೇಳಿದ್ದಾರೆ. ಕೂಡಲೇ ಆಂಬ್ಯುಲೆನ್ಸ್ ತರಿಸಿ, ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ, ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಭಾಸ್ಕರ್ ಆರೋಗ್ಯ ಸುಧಾರಣೆಯಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ. ಆರೋಪಿಗೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದೆ.
Next Story