ನದಿ ನೀರಿಗೆ ಬಿದ್ದ ಮುಸ್ಲಿಂ ಗೆಳೆಯನ ರಕ್ಷಣೆಗೆ ಧಾವಿಸಿದ ಹಿಂದೂ ಯುವಕ: ಇಬ್ಬರೂ ನೀರುಪಾಲು
ಬೆಂಗಳೂರು, ಜು.16: ಆಕಸ್ಮಾತಾಗಿ ನದಿ ನೀರಿಗೆ ಬಿದ್ದ ಯುವಕನೊಬ್ಬನನ್ನು ರಕ್ಷಿಸಲು ತೆರಳಿದ ಗೆಳೆಯನೂ ಕೂಡ ನೀರಾಪಾಲಾಗಿರುವ ಘಟನೆ ಇಲ್ಲಿನ ಕನಕಪುರದ ಮೇಕೆದಾಟುವಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ನಾಪತ್ತೆಯಾಗಿರುವ ಬೀದರ್ ಜಿಲ್ಲೆಯವರಾದ ಭವಾನಿ ಶಂಕರ್(29) ಮತ್ತು ಶಮೀರ್ ರಹಮಾನ್(29) ನಗರದ ಸೋಲದೇವನಹಳ್ಳಿಯ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ಗಳಾಗಿದ್ದರು ಎಂದು ತಿಳಿದುಬಂದಿದೆ.
ರವಿವಾರ ನಾಲ್ವರು ಸ್ನೇಹಿತರು ಪ್ರವಾಸಕ್ಕೆಂದು ಕನಕಪುರ ತಾಲೂಕಿನ ಮೇಕೆದಾಟಿಗೆ ತೆರಳಿದ್ದರು. ಮೇಕೆದಾಟಿನ ಬಂಡೆಯ ಮೇಲೆ ನಿಂತು ಕಾವೇರಿ ನೀರು ಹರಿಯುವುದರ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಕಾಲುಜಾರಿ ರಹಮಾನ್ ನೀರಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಧಾವಿಸಿದ ಭವಾನಿ ಶಂಕರ್ ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಕೆಆರ್ಎಸ್ ಜಲಾಶಯದಿಂದ ಹೆಚ್ಚುವರಿ ನೀರನ್ನು ಹರಿಬಿಟ್ಟಿದ್ದು, ನೀರಿನ ಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಇಬ್ಬರು ಕೂಡಾ ಕೊಚ್ಚಿ ಹೋಗಿದ್ದಾರೆ. ಸಾತನೂರು ಠಾಣಾ ಪೊಲೀಸರಿಂದ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಇದುವರೆಗೆ ಇಬ್ಬರೂ ಪತ್ತೆಯಾಗಿಲ್ಲ.