ಬೆಳಗಾವಿಯಲ್ಲಿ ತೆರೆದುಕೊಳ್ಳದ ರಾಷ್ಟ್ರಧ್ವಜ
ಬೆಳಗಾವಿ, ಆ. 15: ಎಪ್ಪತ್ತೇರಡನೆ ಸ್ವಾತಂತ್ರೊತ್ಸವದ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಧ್ವಜಾರೋಹಣ ಮಾಡಿದ ವೇಳೆ ರಾಷ್ಟ್ರಧ್ವಜ ತೆರೆದುಕೊಳ್ಳಲಿಲ್ಲ. ನಂತರ ತಕ್ಷಣ ಕೆಳಗಿಳಿಸಿ, ಧ್ವಜಕ್ಕೆ ಕಟ್ಟಲಾಗಿದ್ದ ಗಂಟು ಬಿಚ್ಚಿ ಹಾರಿಸಲಾಯಿತು.
ಬುಧವಾರ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಆರಂಭಗೊಂಡಿತು. ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆ ಸಚಿವರು ವೇದಿಕೆ ಮೇಲೇರಿದರು. ಧ್ವಜಸ್ತಂಭಕ್ಕೆ ಕಟ್ಟಿದ್ದ ಧ್ವಜದ ಹಗ್ಗವನ್ನು ಹಿಡಿದು ಎಳೆದರು. ಕೂಡಲೇ ರಾಷ್ಟ್ರಗೀತೆ ಆರಂಭಗೊಂಡಿತು. ಆದರೆ, ರಾಷ್ಟ್ರಧ್ವಜ ತೆರೆದುಕೊಳ್ಳಲಿಲ್ಲ.
ಕೂಡಲೇ ಪೊಲೀಸ್ ಸಿಬ್ಬಂದಿ ಬಂದು, ಧ್ವಜವನ್ನು ಕೆಳಗಿಸಿದರು. ಬಿಗಿಯಾಗಿ ಕಟ್ಟಿದ್ದ ಹಗ್ಗದ ಗಂಟನ್ನು ಸಡಿಲುಗೊಳಿಸಿದರು. ಧ್ವಜವನ್ನು ಬಿಚ್ಚಿ, ಹಾರಿಸಿದರು. ನಂತರ ಧ್ವಜವನ್ನು ಮೇಲಕ್ಕೆ ಏರಿಸಿ, ಕಟ್ಟಲಾಯಿತು. ಅಷ್ಟರಲ್ಲಿ ರಾಷ್ಟ್ರಗೀತೆ ಕೊನೆಗೊಂಡಿತ್ತು.
ಬೆಳಗಾವಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ, ಉತ್ತರ ವಲಯದ ಐಜಿಪಿ ಅಲೊಕ್ ಕುಮಾರ್, ನಗರ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ, ಎಸ್ಪಿ ಸುಧೀರಕುಮಾರ ರೆಡ್ಡಿ, ಡಿಸಿಪಿ ಸೀಮಾ ಲಾಟ್ಕರ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.