ಬೆಂಗಳೂರು ಕೃಷಿ ವಿವಿ: ಆತ್ಮಹತ್ಯೆಗೆ ಶರಣಾದ ರೈತರ ಮಕ್ಕಳಿಗೆ ಶೈಕ್ಷಣಿಕ ಸಾಲ ಮನ್ನಾ
ಬೆಂಗಳೂರು, ಸೆ.30: ಆತ್ಮಹತ್ಯೆಗೆ ಶರಣಾದ ರೈತರ ಮಕ್ಕಳಿಗೆ 2018-19ನೆ ಸಾಲಿನಿಂದ ಶೈಕ್ಷಣಿಕ ಶುಲ್ಕ ಮನ್ನಾ ಮಾಡಲು ಬೆಂಗಳೂರು ಕೃಷಿ ವಿವಿ ಆಡಳಿತ ಮಂಡಳಿ ನಿರ್ಧರಿಸಿದೆ.
ಬೆಂಗಳೂರು ಕೃಷಿ ವಿವಿಯ ವ್ಯಾಪ್ತಿಯ ಕಾಲೇಜುಗಳಲ್ಲಿ ಕೃಷಿ ಪದವಿ ವ್ಯಾಸಂಗ ಮಾಡುತ್ತಿದ್ದು, ಆತ್ಮಹತ್ಯೆಗೆ ಶರಣಾಗಿರುವ ರೈತರ ಮಕ್ಕಳಿಗೆ 2018-19ನೆ ಸಾಲಿನಿಂದ ಶೈಕ್ಷಣಿಕ ಶುಲ್ಕ ಮನ್ನಾ ಮಾಡಲು ಕೃಷಿ ವಿವಿಯ 378ನೆ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಶೈಕ್ಷಣಿಕ ಸಾಲ ಮನ್ನಾ ಸೌಲಭ್ಯ ಪಡೆಯಲು ಅಭ್ಯರ್ಥಿ ಮತ್ತು ಪೋಷಕರು ಕರ್ನಾಟಕದ ನಾಗರೀಕರಾಗಿರಬೇಕು. ಅಭ್ಯರ್ಥಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾಮಾನ್ಯ ಪರೀಕ್ಷೆ ಮೂಲಕ ಮೆರಿಟ್ ಆಧಾರದ ಮೇಲೆ ಸೀಟ್ನ್ನು ಪಡೆದುಕೊಂಡಿರಬೇಕು. ಅಭ್ಯರ್ಥಿಯು ತಂದೆ ಅಥವಾ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸರಕಾರದಿಂದ ದೃಢೀಕೃತ ಪ್ರಮಾಣ ಪತ್ರ ಅಥವಾ ಘೋಷಿಸ್ಪಟ್ಟ ದಾಖಲಾತಿ ಹೊಂದಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಬೆಂಗಳೂರು ಕೃಷಿ ವಿವಿ ವ್ಯಾಪ್ತಿಯಲ್ಲಿ 5 ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಆಯಾ ಕಾಲೇಜುಗಳಲ್ಲಿ ಇಂತಹ ವಿದ್ಯಾರ್ಥಿಗಳ ಕುರಿತಂತೆ ಮಾಹಿತಿ ಒದಗಲಿಸಲು ಕೃಷಿ ವಿವಿ ಕುಲಪತಿಗಳು ಸೂಚಿಸಿದ್ದಾರೆ.