ಸಿದ್ದರಾಮಯ್ಯ ಈಗ ಮೊದಲಿನಂತಿಲ್ಲ: ಎಚ್.ಡಿ.ದೇವೇಗೌಡ
ಬೆಂಗಳೂರು, ಜ.30: ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದಂತೆ ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಸಂಪರ್ಕಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಗುತ್ತಿಲ್ಲವೆಂದು ಆರೋಪಿಸುವುದು ಸರಿಯಲ್ಲ. ಮೈತ್ರಿ ಸರಕಾರದಲ್ಲಿ ಇಂತಹ ಹೇಳಿಕೆಗಳು ಸರಕಾರಕ್ಕೆ ಕಂಟಕವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಒಂದು ನಿಗಮ ಬಿಟ್ಟರೆ ಉಳಿದೆಲ್ಲ ಸ್ಥಾನವನ್ನು ಕಾಂಗ್ರೆಸ್ಗೆ ಕೊಟ್ಟಿದ್ದೇವೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇನ್ನೂ ಹೇಗೆ ಆಡಳಿತ ನಡೆಸಬೇಕು ಎಂದು ನಮಗೆ ಗೊತ್ತಾಗುತ್ತಿಲ್ಲ. ಪ್ರತಿ ಕಾಂಗ್ರೆಸ್ ಶಾಸಕರು ಒಂದೊಂದು ಮಾತಾಡುತ್ತಾರೆ. ಇಂತಹ ಮಾತುಗಳಿಗೆ ಕಾಂಗ್ರೆಸ್ನ ಮುಂಚೂಣಿ ನಾಯಕರು ಕಡಿವಾಣ ಹಾಕಬೇಕೆಂದು ತಿಳಿಸಿದರು.
ರಾಷ್ಟ್ರದಲ್ಲಿ ಹಲವು ಸಮ್ಮಿಶ್ರ ಸರಕಾರಗಳು ಬಂದಿವೆ. ನಾನು ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಪ್ರಧಾನಿ ಆಗಿದ್ದೆ. ರಾಜ್ಯದಲ್ಲಿ ಧರ್ಮಸಿಂಗ್ ಜೊತೆ ಮೈತ್ರಿ ಮಾಡಿಕೊಂಡಿದ್ದಾಗ ಸರಕಾರದಲ್ಲಿ ಷರತ್ತುಗಳು ಇರಲಿಲ್ಲ. ಅವರ ಸರಕಾರ ಬೀಳೋಕೆ ನಾನಾಗಲಿ ಕುಮಾರಸ್ವಾಮಿ ಆಗಲಿ ಕಾರಣರಲ್ಲ. ಇವತ್ತು ಅದೇ ಕಾಂಗ್ರೆಸ್ ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿ ಸರಕಾರ ನಡೆಸಿದ್ದಾರೆ. ಅದು ಸಕ್ರಮವೋ ಅಕ್ರಮವೋ, ಅದರ ಬಗ್ಗೆ ನಾವು ಯಾವ ಟೀಕೆಯನ್ನೂ ಮಾಡಿಲ್ಲ. ಕುಮಾರಸ್ವಾಮಿ ಇಲ್ಲಿಯವರೆಗೂ ಎಲ್ಲೆ ಮೀರಿ ಮಾತನಾಡಿಲ್ಲ. ಒಮ್ಮೆ ಮಾತ್ರ ನಾನು ಗುಮಾಸ್ತನ ಹಾಗೆ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದು ನಿಜ. ಆದರೆ, ಅದು ಜೆಡಿಎಸ್ ಪಕ್ಷದ ಶಾಸಕರ ಎದುರು ಖಾಸಗಿಯಾಗಿ ಹೇಳಿಕೊಂಡಿದ್ದು. ಮೈತ್ರಿ ಸರಕಾರವನ್ನು ಮುನ್ನಡೆಸುವುದು ಎಷ್ಟು ಕಷ್ಟವಿದೆ ಎಂಬ ಅರ್ಥದಲ್ಲಿ ಪದಪ್ರಯೋಗ ಮಾಡಿದ್ದು ಬಿಟ್ಟರೆ ಬೇರಾವ ಉದ್ದೇಶವೂ ಇರಲಿಲ್ಲ ಎಂದು ಅವರು ಸಮರ್ಥಿಸಿಕೊಂಡರು.
ಈಗ ಸಿದ್ದರಾಮಯ್ಯ ಮೊದಲಿನಂತಿಲ್ಲ
ಸಿದ್ದರಾಮಯ್ಯ ಈಗ ಮೊದಲಿನ ತರಹ ಇಲ್ಲ. ಅವರು ಯಾವ ಪಕ್ಷದಿಂದ ಹೋಗಿ 5 ವರ್ಷ ಮುಖ್ಯಮಂತ್ರಿಯಾದರು ಎಂಬುದನ್ನು ಅರ್ಥ ಮಾಡಿಕೊಳ್ಳಲಿ. ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾಗ ಯಾವ ಕೆಲಸವನ್ನೂ ಮಾಡಲಿಲ್ಲ. ಆಗ ನನಗಾಗಿರುವ ನೋವು ದೇವರಿಗೇ ಗೊತ್ತು. ಸೋನಿಯಾ ಗಾಂಧಿ ಮೇಲೆ ಒತ್ತಡ ಹಾಕಿದ್ದರೆ ನಾನು ಅಂದೇ ಮುಖ್ಯಮಂತ್ರಿಯಾಗುತ್ತಿದ್ದೆ ಎಂದು ಹೇಳಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿಯೇ ಉತ್ತರಿಸಬೇಕು.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಮಂತ್ರಿ