ಸಂಶಯಾಸ್ಪದ ವ್ಯಕ್ತಿಗಳು ಕಂಡರೆ ಮಾಹಿತಿ ನೀಡಿ: ಟಿ.ಸುನೀಲ್ ಕುಮಾರ್ ಸೂಚನೆ
ಕೆಆರ್ ಮಾರುಕಟ್ಟೆಯ ಜಾಮೀಯಾ ಮಸೀದಿಗೆ ನಗರ ಪೊಲೀಸ್ ಆಯುಕ್ತ ಭೇಟಿ
ಬೆಂಗಳೂರು, ಎ.26: ಯಾರಾದರೂ ಸಂಶಯಾಸ್ಪದ ವ್ಯಕ್ತಿಗಳು, ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಇಂದಿಲ್ಲಿ ಹೇಳಿದರು.
ಶುಕ್ರವಾರ ನಗರದ ಕೆಆರ್ ಮಾರುಕಟ್ಟೆಯ ಜಾಮೀಯಾ ಮಸೀದಿಯಲ್ಲಿ ನಮಾಝ್ ಬಳಿಕ ಮುಸ್ಲಿಮರನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ನಂತರ ಬೆಂಗಳೂರಿನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಇದರ ಜೊತೆಗೆ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದರು.
ಪ್ರತಿಯೊಂದು ಪ್ರಾರ್ಥನಾ ಸ್ಥಳಗಳಲ್ಲಿ ಬರುವ ಮತ್ತು ಹೋಗುವ ಜನರ ಬಗ್ಗೆ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲು ವ್ಯವಸ್ಥೆ ಮಾಡಬೇಕು. ಅದು ಸಿಸಿಟಿವಿ ಆಗಬಹುದು. ಖಾಸಗಿ ಭದ್ರತೆ ಆಗಬಹುದು. ಸಂಶಯಾಸ್ಪದ ವ್ಯಕ್ತಿಗಳ ಹಾಗೂ ಲಗ್ಗೇಜು, ಬ್ಯಾಗ್ಗಳನ್ನು ತಪಾಸಣೆ ಮಾಡುವುದಾಗಬಹುದು ಎಂದರು.
ಜಾಮೀಯ ಮಸೀದಿಯ ಖತೀಬ್ ಒ ಇಮಾಮ್ ಮೌಲಾನ ಮುಹಮ್ಮದ್ ಮಕ್ಸೂದ್ ಇಮ್ರಾನ್ ರಶಾದಿ ಮಾತನಾಡಿ, ಪೊಲೀಸರೊಂದಿಗೆ ತಾವು ಸಹ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ಅದೇ ರೀತಿ, ಇತರೆ ಮಸೀದಿಗಳಿಗೂ ಭದ್ರತೆ, ಮಾಹಿತಿ ಕುರಿತು ತಿಳಿಸುವಂತೆ ಸೂಚಿಸಲಾಗುವುದೆಂದು ಹೇಳಿದರು.