ಶ್ರೀಮಂತ ಪಾಟೀಲ್ ಅನಾರೋಗ್ಯ ಪ್ರಕರಣ ಅಸಹಜವಾಗಿದೆ: ಸ್ಪೀಕರ್
ಮಾಹಿತಿ ಸಂಗ್ರಹಿಸಿ ಶುಕ್ರವಾರ ವರದಿ ನೀಡಲು ಗೃಹಸಚಿವರಿಗೆ ಸೂಚನೆ
ಬೆಂಗಳೂರು, ಜು.18: ಶ್ರೀಮಂತ ಪಾಟೀಲ್ ಮುಂಬೈ ಆಸ್ಪತ್ರೆಗೆ ದಾಖಲಾದ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಮೈತ್ರಿ ಸರಕಾರದ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ಯುದ್ಧ ನಡೆಯಿತು.
ಈ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, "ಇಂದು ಬೆಳಗ್ಗೆ ಶ್ರೀಮಂತ ಪಾಟೀಲ್ ಸಹಿ ಮಾಡಿದ್ದಾರೆ ಎನ್ನಲಾದ ಪತ್ರ ನನಗೆ ಸಿಕ್ಕಿದೆ. ಆದರೆ ಅದರಲ್ಲಿ ಯಾವುದೇ ಲೆಟರ್ ಪ್ಯಾಡ್ ಇಲ್ಲ. ತಾನು ತೀವ್ರ ಹೃದಯ ನೋವಿನಿಂದ ಬಳಲುತ್ತಿದ್ದು, ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದನಕ್ಕೆ ಗೈರಾಗುತ್ತೇನೆ ಎಂದು ತಿಳಿಸಲಾಗಿದೆ. ಆದರೆ ಒಬ್ಬ ಸ್ಪೀಕರ್ ಗೆ ಸಲ್ಲಿಸಬೇಕಾದ ರೀತಿಯಲ್ಲಿ ಆ ಪತ್ರವಿಲ್ಲ. ಕನಿಷ್ಠ ಪಕ್ಷ ಲೆಟರ್ ಪ್ಯಾಡ್ ಕೂಡ ಇಲ್ಲ, ದಿನಾಂಕ ಕೂಡ ಹಾಕಿಲ್ಲ. ಆದ್ದರಿಂದ ಶ್ರೀಮಂತ ಪಾಟೀಲ್ ರ ಪತ್ರ ಸಹಜವೆಂಬಂತೆ ಕಾಣುತ್ತಿಲ್ಲ. ಹಾಗಾಗಿ ಶ್ರೀಮಂತ ಪಾಟೀಲ್ ಕುಟುಂಬಸ್ಥರನ್ನು ಭೇಟಿಯಾಗಿ ಮಾಹಿತಿ ಕಲೆಹಾಕಬೇಕು ಎಂದು ನಾನು ಗೃಹಸಚಿವರಿಗೆ ಸೂಚಿಸುತ್ತೇನೆ. ಶುಕ್ರವಾರ ವರದಿ ನೀಡಬೇಕು" ಎಂದು ಹೇಳಿದರು.
Next Story