ಲೋಕಸಭೆ ಚುನಾವಣೆ ಪ್ರಕ್ರಿಯೆ: 189 ಕೋಟಿ ರೂ. ಅಕ್ರಮ ನಗದು ಪತ್ತೆ- ಐಟಿ
ಬೆಂಗಳೂರು, ಜು.24: ಲೋಕಸಭಾ ಚುನಾವಣೆ ಪ್ರಕ್ರಿಯೆ ಸಂಬಂಧ ಅಕ್ರಮ ಹಣ ಪತ್ತೆಗಾಗಿ ಕರ್ನಾಟಕ ಹಾಗೂ ಗೋವಾ ವಲಯದಲ್ಲಿ 158 ತಂಡ ರಚಿಸಿ, 189 ಕೋಟಿ ರೂ.ನಗದು ಅಕ್ರಮ ಹಣ ಪತ್ತೆಹಚ್ಚಲಾಗಿದೆ ಎಂದು ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ (ಕರ್ನಾಟಕ-ಗೋವಾ ವಲಯ) ಬಿ.ಆರ್.ಬಾಲಕೃಷ್ಣನ್ ಹೇಳಿದ್ದಾರೆ.
ಬುಧವಾರ ನಗರದ ಆದಾಯ ತೆರಿಗೆ ಕಚೇರಿಯಲ್ಲಿ ಇಲಾಖೆಯ 159ನೆ ವರ್ಷಾಚರಣೆ ಹಾಗೂ ಆದಾಯ ತೆರಿಗೆ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಒಟ್ಟು 7563 ಕೋಟಿ ರೂ.ನಷ್ಟು ಆದಾಯ ಮರೆಮಾಚಿದ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ತೆರಿಗೆ ವಂಚಕರ ವಿರುದ್ಧ 335 ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಅದೇ ರೀತಿ, 2019ರಲ್ಲಿ 87 ಪ್ರಕರಣಗಳಲ್ಲಿ 573 ಕೋಟಿ ಬೇನಾಮಿ ಆಸ್ತಿ ಪತ್ತೆಯನ್ನು ಪತ್ತೆಹಚ್ಚಲಾಗಿದ್ದು, ತೆರಿಗೆಗಳ್ಳರ ವಿರುದ್ಧ 2016ರ ಬೇನಾಮಿ ಆಸ್ತಿ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ ಎಂದರು.
3ನೇ ಸ್ಥಾನ: ದೇಶದ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ-ಗೋವಾ ವಲಯ ಮೂರನೇ ಸ್ಥಾನದಲ್ಲಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ವಲಯದಿಂದ 1.51 ಲಕ್ಷ ಕೋಟಿ ರೂ. ಆದಾಯ ತೆರಿಗೆ ಸಂಗ್ರಹದ ಗುರಿ ಹೊಂದಿದೆ ಎಂದು ಹೇಳಿದರು.
ಕರ್ನಾಟಕ-ಗೋವಾ ವಲಯದಲ್ಲಿ ಕಳೆದ ಹತ್ತು ವರ್ಷದ ತೆರಿಗೆ ಸಂಗ್ರಹದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬಂದಿದೆ. 2008-09ರಲ್ಲಿ ತೆರಿಗೆ ಸಂಗ್ರಹ ಮೊತ್ತ ಕೇವಲ 30 ಸಾವಿರ ಕೋಟಿ ರೂ.ನಷ್ಟಿತ್ತು. ಕಳೆದ ವರ್ಷ ನಮ್ಮ ವಲಯದಿಂದ 1.21 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು.
ಪ್ರಸಕ್ತ ವರ್ಷ 1.51 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಹೊಂದಿದ್ದೇವೆ. 2013-14ರಲ್ಲಿ 12.73 ಲಕ್ಷದಷ್ಟಿದ್ದ ಆದಾಯ ತೆರಿಗೆ ಹಿಂಪಡೆಯುವವರ ಸಂಖ್ಯೆ 2018-19ರಲ್ಲಿ 41.26 ಲಕ್ಷಕ್ಕೆ ಹೆಚ್ಚಾಗಿದೆ. ವಲಯದಲ್ಲಿ ಆದಾಯ ತೆರಿಗೆ ಸೋರಿಕೆ ತಡೆಗೆ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಾಲಕೃಷ್ಣನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ಬೆಂಗಳೂರು ವಲಯದ ಕೇಂದ್ರ ತೆರಿಗೆ ಪ್ರಧಾನ ಆಯುಕ್ತ ಡಿ.ಪಿ.ನಾಗೇಂದ್ರ ಕುಮಾರ್ ಸೇರಿದಂತೆ ಪ್ರಮುಖರಿದ್ದರು.