ಚಿನ್ನಾಭರಣ ಮಳಿಗೆಯಲ್ಲಿ ಗುಂಡು ಹಾರಾಟ ಪ್ರಕರಣ: ಪ್ರಮುಖ ಆರೋಪಿ ಬಂಧನ
ಫೈಲ್ ಚಿತ್ರ
ಬೆಂಗಳೂರು, ಆ.25: ವೈಯಾಲಿಕಾವಲ್ನ ಚಿನ್ನಾಭರಣ ಮಳಿಗೆಯಲ್ಲಿ ಪಿಸ್ತೂಲಿನಿಂದ ಗುಂಡು ಹಾರಿಸಿದ ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೈಲಾಶ್ ಎಂಬಾತ ಬಂಧಿತ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ.
ಈಗಾಗಲೇ ಬಂಧಿತರಾಗಿರುವ ಸೊಲ್ಲಾಪುರದ ಬಾಲಾಜಿ ರಮೇಶ್ ಗಾಯಕವಾಡ, ಹರಿಯಾಣದ ಬಲವಾನ್ ಸಿಂಗ್, ರಾಜಸ್ಥಾನದ ಶ್ರೀರಾಮ ಬಿಷ್ಣೋಯಿ, ಓಂ ಪ್ರಕಾಶ್ ಅನ್ನು ಕೈಲಾಶ್ ಸಂಪರ್ಕ ಮಾಡಿ ವೈಯಾಲಿಕಾವಲ್ ಠಾಣೆ ವ್ಯಾಪ್ತಿಯ ಸಾಮ್ರಾಟ್ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ಮಾಡುವಂತೆ ಸೂಚಿಸಿದ್ದ. ಹಾಗಾಗಿಯೇ, ಕೈಲಾಶ್ ಅಣತಿಯಾಂತೆ ಆರೋಪಿಗಳು ದರೋಡೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಬಂಧಿತ ಕೈಲಾಶ್ ಹೊರ ರಾಜ್ಯದ ನಿವಾಸಿಯಾಗಿದ್ದು, ಆಗಾಗ ಬೆಂಗಳೂರಿಗೆ ಬಂದು ನಗರದ ಚಿನ್ನಾಭರಣ ಮಳಿಗೆಗಳ ಮಾಹಿತಿ ಪಡೆಯುತ್ತಿದ್ದ. ಹೀಗೆ ಸಾಮ್ರಾಟ್ ಚಿನ್ನಾಭರಣದ ಮಾಲಕರಾದ ಆಶಿಷ್ ಮತ್ತು ರಾಕಿ ದಂಪತಿ ಬಗ್ಗೆ ಮಾಹಿತಿ ಕಲೆ ಹಾಕಿ ದರೋಡೆಗೆ ಸಂಚು ರೂಪಿಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆಸಲಾಗಿದೆ.