370ನೇ ವಿಧಿ ರದ್ದು ಖಂಡನೀಯ: ಸಮಾಜವಾದಿ ಅಧ್ಯಯನ ಕೇಂದ್ರ
ಬೆಂಗಳೂರು, ಸೆ.7: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ ಕೇಂದ್ರ ಸರಕಾರ ಸರ್ವಾಧಿಕಾರ ಧೋರಣೆ ಅನುಸರಿಸಿದೆ ಎಂದು ಸಮಾಜವಾದಿ ಅಧ್ಯಯನ ಕೇಂದ್ರ ಆರೋಪಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲ ಬಾಪು ಹೆದ್ದೂರಶೆಟ್ಟಿ, ಜಮ್ಮು ಮತ್ತು ಕಾಶ್ಮೀರ ಜನರ ಅಭಿಪ್ರಾಯ ಮತ್ತು ಆಶಯಗಳಿಗೆ ಮನ್ನಣೆ ನೀಡದೆ ಕೇಂದ್ರ ಸರಕಾರ ವಿಶೇಷ ಸ್ಥಾನ ರದ್ದು ಮಾಡಿದ್ದು, ಇದು ಓಟ್ ಬ್ಯಾಂಕ್ ರಾಜಕಾರಣವಾಗಿದೆ. ಕಾಶ್ಮೀರದಲ್ಲಿ ಶೇ.96.4 ರಷ್ಟು ಮುಸ್ಲಿಂ ಇದ್ದು, ಜಮ್ಮುವಿನಲ್ಲಿ ಶೇ.33.5ರಷ್ಟು ಮುಸ್ಲಿಂ, ಶೇ.62.5ರಷ್ಟು ಹಿಂದೂಗಳು ವಾಸಿಸುತ್ತಿದ್ದಾರೆ. ಲಡಾಕ್ನಲ್ಲಿ ಶೇ.46.6ರಷ್ಟು ಮುಸ್ಲಿಂ, ಶೇ. 39.7ರಷ್ಟು ಬುದ್ಧಿಸ್ಟ್ ಹಾಗೂ ಶೇ.2.31ರಷ್ಟು ಹಿಂದೂಗಳಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಕೈಗೊಳ್ಳಬೇಕಾಗಿತ್ತು. ಆದರೆ, ಏಕಾಏಕಿ ವಿಶೇಷ ಸ್ಥಾನ ರದ್ದುಗೊಳಿಸಿದ್ದೇಕೆ ಎಂದು ಪ್ರಶ್ನಿಸಿದರು.
ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಶೇ.95ರಷ್ಟು ಕಾಶ್ಮೀರಿ ಮುಸ್ಲಿಮರು ಭಾರತದ ನಾಗರಿಕರಾಗಲು ಬಯಸುತ್ತಿಲ್ಲ. ಆದರೆ ನನಗೆ ಅನುಮಾನವಿದೆ ಬುದ್ಧಿವಂತಿಕೆಯಿಂದ, ಬಲವಂತವಾಗಿ ಅವರನ್ನು ಉಳಿಸಿಕೊಳ್ಳಲಾಗುತ್ತಿದೆ. ದೀರ್ಘಕಾಲದ ರಾಜಕೀಯ ಹೊಂದಲು ಸಾಧ್ಯವಿಲ್ಲ. ತಕ್ಷಣದ ನೀತಿಗೆ ಈ ಕ್ರಮ ಸರಿ ಹೊಂದಬಹುದು ಎಂದು ಜಯಪ್ರಕಾಶ್ ನಾರಾಯಣ್ 1956 ರಲ್ಲಿ ನೆಹರು ಕಾಶ್ಮೀರ ಹಾಗೂ ಅಲ್ಲಿನ ಜನತೆ ಕುರಿತು ಪತ್ರ ಬರೆದಿದ್ದರು ಎಂದು ನೆನೆದರು.