ಅನರ್ಹ ಶಾಸಕರ ವಿರುದ್ಧ ಎನ್ಐಎ ತನಿಖೆಗೆ ಕೋರಿ ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್
ಬೆಂಗಳೂರು, ನ.26: ಹಣಕ್ಕಾಗಿ ಜೆಡಿಎಸ್, ಕಾಂಗ್ರೆಸ್ ಪಕ್ಷ ತೊರೆದು ಅನರ್ಹರಾಗಿರುವ 17 ಮಂದಿ ಮಾಜಿ ಶಾಸಕರು ಹಾಗೂ ಇತರರ ವಿರುದ್ಧ ಎನ್ಐಎ ತನಿಖೆ ನಡೆಸಲು ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಎನ್ಐಎ(ರಾಷ್ಟ್ರೀಯ ತನಿಖಾ ದಳ) ವಿಶೇಷ ಕೋರ್ಟ್ ವಕೀಲರ ವಾದವನ್ನು ಆಲಿಸಿ ತೀರ್ಪು ಕಾಯ್ದಿರಿಸಿದೆ.
ಹಿರಿಯ ವಕೀಲ ಬಾಲನ್ ಅವರು ಅನರ್ಹ ಶಾಸಕರ ವಿರುದ್ಧ ಸಲ್ಲಿಸಿರುವ ಅರ್ಜಿ ವಿಚಾರಣೆ 52ನೆ ಎನ್ಐಎ ಕೋರ್ಟ್ನಲ್ಲಿ ನಡೆಯಿತು. ಅರ್ಜಿದಾರ ವಕೀಲ ಬಾಲನ್ ವಾದಿಸಿ, ಬಿಜೆಪಿ ಪಕ್ಷ 17 ಶಾಸಕರ ಖರೀದಿಗೆ 1 ಸಾವಿರ ಕೋಟಿ ರೂ.ಖರ್ಚು ಮಾಡಿದೆ. ಈ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ತಿಳಿಯಬೇಕಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಕೂಡ ಅನರ್ಹರಿಂದಾಗಿಯೇ ಬಿಜೆಪಿ ಸರಕಾರ ರಚನೆ ಮಾಡಲು ಸಾಧ್ಯವಾಗಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಅನರ್ಹ ಶಾಸಕರನ್ನು ಮಂತ್ರಿ ಮಾಡುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಶಕ್ತಿಗಳಿಂದ ಹಣ ಬರುತ್ತಿದೆ ಎಂಬ ಆರೋಪವಿದ್ದು, ಈ ಹಣದ ಮೂಲದ ಬಗ್ಗೆ ಹಾಗೂ 1 ಸಾವಿರ ಕೋಟಿ ರೂ.ಹಣ ಖರ್ಚು ಮಾಡಿದ ಬಗ್ಗೆ ಎನ್ಐಎ ತನಿಖೆ ನಡೆಸಲು ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಎರಡು ಕಡೆಯ ವಕೀಲರ ವಾದ ಆಲಿಸಿದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು.