ರಾಜೀನಾಮೆ ಸಲ್ಲಿಸಿ ಸಾಕಷ್ಟು ನೋವು ಅನುಭವಿಸಿದ್ದೇವೆ: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್
ಬೆಂಗಳೂರು, ಡಿ.8: ಯಾವುದೇ ಪಕ್ಷದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಷ್ಟಕ್ಕೆ ಸಿಲುಕಿಕೊಳ್ಳುವುದು ಬೇಡ ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರಾಜೀನಾಮೆ ಸಲ್ಲಿಸಿ ಮೂರು ತಿಂಗಳು ಕಾಲ ಸಾಕಷ್ಟು ನೋವು ಅನುಭವಿಸಿದ್ದೇವೆ. ರಾಜೀನಾಮೆಯಿಂದಾಗಿ, ರಾಜಕೀಯವಾಗಿ ಹಾಗೂ ಕ್ಷೇತ್ರದಲ್ಲೂ ಅಪಪ್ರಚಾರ ಮಾಡುತ್ತಾರೆ. ಇದರಿಂದ, ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ. ಒಂದು ವೇಳೆ, ಇದಕ್ಕೆಲ್ಲಾ ಸಿದ್ದವಿದ್ದರೆ ರಾಜೀನಾಮೆ ನೀಡಿ ಎಂದರು.
17 ಶಾಸಕರ ರಾಜೀನಾಮೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಯಿತು. ಗಣ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡು ಸುಳ್ಳುಗಳನ್ನೇ ಹಬ್ಬಿಸಲಾಯಿತು. ಅಷ್ಟೇ ಅಲ್ಲದೆ, ಹೋರಾಟಗಾರರ ಹೆಸರಿನಲ್ಲೂ ನಮ್ಮ ಹೆಸರಿಗೆ ಕಳಂಕ ತಂದಿದ್ದಾರೆ ಎಂದು ಸೋಮಶೇಖರ್ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ನಡುವೆ ಒಳ ಒಪ್ಪಂದ ನಡೆದಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ತಮ್ಮ ವಿರುದ್ಧ ಕೆಲಸ ಮಾಡಿದ್ದಾರೆ ಎಂದ ಅವರು, ಮಂತ್ರಿ ಮಾಡುತ್ತಾರೆ ಎನ್ನುವ ಆಸೆಯಿಂದ ನಾನು ಬಿಜೆಪಿ ಪಕ್ಷವನ್ನು ಸೇರಿಲ್ಲ ಎಂದು ಅವರು ತಿಳಿಸಿದರು.