ಡಾ.ಸಿ.ಎನ್. ರಾಮಚಂದ್ರನ್ ಅವರಿಗೆ ‘ಶ್ರೀ ಸಾಹಿತ್ಯ’ ಪ್ರಶಸ್ತಿ ಪ್ರದಾನ
ಬೆಂಗಳೂರು, ಜ.5:ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅವರಿಗೆ ಬಿ.ಎಂ.ಶ್ರೀ ಪ್ರತಿಷ್ಠಾನದ ವತಿಯಿಂದ ಪ್ರಸ್ತುತ ಸಾಲಿನ ‘ಶ್ರೀ ಸಾಹಿತ್ಯ’ ಪ್ರಶಸ್ತಿ ಪ್ರದಾನಿಸಿ, ಗೌರವಿಸಲಾಯಿತು.
ರವಿವಾರ ನಗರದ ಎನ್ಆರ್ ಕಾಲೋನಿ ಪ್ರತಿಷ್ಠಾನದ ಬಿ.ಎಂ.ಶ್ರೀ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ಫಲಕ, 1ಲಕ್ಷ ರೂ.ನಗದು ಹಾಗೂ ಸ್ಮರಣಿಕೆ ಅನ್ನು ರಾಮಚಂದ್ರನ್ ಅವರಿಗೆ ಪ್ರದಾನಿಸಿದರು.
ಬಳಿಕ ಮಾತನಾಡಿದ ಚಂದ್ರಶೇಖರ ಕಂಬಾರ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡುವ ಈ ಸಾಲಿನ ಶ್ರೀ ಸಾಹಿತ್ಯ ಪ್ರಶಸ್ತಿಗೆ ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಅವರನ್ನು ಆಯ್ಕೆ ಮಾಡಿರುವುದು ತೃಪ್ತಿ ತಂದಿದೆ ಎಂದು ನುಡಿದರು.
ರಾಮಚಂದ್ರನ್ ಅವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿಮರ್ಶೆ ವಿಭಾಗದಲ್ಲೂ ಹೆಸರು ಮಾಡಿದ್ದಾರೆ. ಇವರಂತೆ ಇನ್ನೂ ಅನೇಕರು ವಿಮರ್ಶೆ, ಅನುವಾದ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಆರ್ಯಾಂಬ ಪಟ್ಟಾಭಿ ಅವರ ರಾಜಸೇವಾಸಕ್ತ ಬಿಎಂ ಶ್ರೀಕಂಠಯ್ಯ ಪುಸ್ತಕ ಬಿಡುಗಡೆ ಮಾಡಲಾಯಿತು. ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಎಸ್. ರಘುರಾಜ್, ಪ್ರತಿಷ್ಠಾನ ಅಧ್ಯಕ್ಷ ಲಕ್ಷ್ಮೀನಾರಾಯಣ, ಗೌರವಾಧ್ಯಕ್ಷ ಎಚ್.ಎನ್.ಕೃಷ್ಣಯ್ಯ , ಗೌರವ ಕಾರ್ಯದರ್ಶಿಗಳಾದ ಬಿ.ಆರ್.ರವೀಂದ್ರನಾಥ್, ಡಾ.ವಿಜಯ ಸುಬ್ಬರಾವ್ ಸೇರಿದಂತೆ ಪ್ರಮುಖರಿದ್ದರು.