43 ಸಂಸ್ಕೃತ ಶಾಲೆಗಳಿಗೆ ಅನುದಾನ ನೀಡಲು ನಿರ್ಧಾರ: ಡಿಸಿಎಂ ಅಶ್ವತ್ ನಾರಾಯಣ
ಬೆಂಗಳೂರು, ಫೆ. 16: ರಾಜ್ಯದಲ್ಲಿನ 43 ಸಂಸ್ಕೃತ ಶಾಲೆಗಳಿಗೆ ಅನುದಾನ ನೀಡುವ ಸಂಬಂಧ ರಾಜ್ಯ ಸರಕಾರ ಶೀಘ್ರದಲ್ಲೇ ನಿರ್ಣಯವನ್ನು ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್ ನಾರಾಯಣ ಇಂದಿಲ್ಲಿ ಭರವಸೆ ನೀಡಿದ್ದಾರೆ.
ರವಿವಾರ ನಗರದ ಬೇಗೂರು ಬ್ರಾಹ್ಮಣ ಸಂಘದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿರುವ 43 ಸಂಸ್ಕೃತ ಶಾಲೆಗಳಿಗೆ ಸರಕಾರದಿಂದ ಅನುದಾನ ನೀಡುತ್ತಿಲ್ಲ. ಆದರೆ, ಅನುದಾನ ನೀಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದ್ದು, ಸಮಿತಿಯೂ ಎಲ್ಲ 43 ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಿಫಾರಸು ಸಲ್ಲಿಸಿದೆ. ಇದನ್ನು ಪರಿಗಣಿಸಿ ಅನುದಾನ ನೀಡುವ ಬಗ್ಗೆ ಸರಕಾರ ನಿರ್ಣಯ ಕೈಗೊಳ್ಳಲಿದೆ ಎಂದರು.
ಯುಗ-ಯುಗಗಳಿಂದ ನಿರಂತರವಾಗಿ ವೇದಾಭ್ಯಾಸ ನಡೆಯುತ್ತಿದ್ದು, ಈ ಕಾರ್ಯಕ್ಕೆ ಮತ್ತಷ್ಟು ಶಕ್ತಿ ತುಂಬವ ಕೆಲಸ ಆಗಬೇಕು. ನಾಡಿನ ಜನ ಕೊಟ್ಟಿರುವ ಈ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ. ಕಣ್ಣಿಗೆ ಕಾಣುವ ಅಭಿವೃದ್ಧಿಯಾದರೆ ಮಾತ್ರ ಸಾಲದು, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಕವಾಗಿಯೂ ಶಕ್ತಿ ತುಂಬಬೇಕು. ಅದಕ್ಕೆ ಒಳ ಶಕ್ತಿ, ಒಳ ಅರಿವು ಬೇಕು ಎಂದರು.
ವ್ಯಕ್ತಿತ್ವದಲ್ಲಿ ಉತ್ತಮ ಚಿಂತನೆ ಇಲ್ಲವಾದರೆ ಯಾವ ಅಭಿವೃದ್ಧಿ ಕಾರ್ಯವೂ ಸಾರ್ಥಕ ಆಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಅಗತ್ಯ ಇದೆ. ಬೇಗೂರಿನಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯ ನಡೆಯುತ್ತಿದ್ದು, ಇದರ ಜತೆಗೆ, ವೇದಾಭ್ಯಾಸ ನಡೆಸಲು ಸಹಕಾರ ನೀಡಲಾಗುವುದು ಎಂದರು.
ಜಾತಿ ಗೊತ್ತಿಲ್ಲದೆ ಗೆಲ್ಲಿಸಿದ್ದಾರೆ: ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಬ್ರಾಹ್ಮಣರೇ ಬಹುಸಂಖ್ಯಾತರು. ನಮ್ಮ ಮಲ್ಲೇಶ್ವರದ ಬ್ರಾಹ್ಮಣರು ನನ್ನ ಕೈ ಹಿಡಿದು ಬೆಳೆಸಿದ್ದಾರೆ. ಇಂದು ನಾನು ಈ ಸ್ಥಾನಕ್ಕೆ ಬರಲು ಕಾರಣಕರ್ತರವರು. ವ್ಯಕ್ತಿ ನೋಡಿ ಮತ ಹಾಕಿ ಗೆಲ್ಲಿಸಿದ್ದಾರೆ. ನಾನು ಯಾವ ಜಾತಿಯವ ಎಂದು ಕ್ಷೇತ್ರದ ಜನರಿಗೆ ಗೊತ್ತೇ ಇರಲಿಲ್ಲ. ಇವತ್ತಿಗೂ ಅದೇ ಪ್ರೀತಿ-ವಿಶ್ವಾಸದಿಂದ ನನ್ನ ಜತೆ ಇದ್ದಾರೆ ಎಂದರು.
ನಾನು ಹೆಚ್ಚುದಿನ ಬೆಂಗಳೂರಿನಲ್ಲಿರಲಿಲ್ಲ, ಶಿಕ್ಷಣಕ್ಕೆ ಶಿವಮೊಗ್ಗ, ಮಂಗಳೂರಿನಲ್ಲಿದ್ದೆ. ವೈದ್ಯ ವೃತ್ತಿಯಲ್ಲಿದ್ದವನಿಗೆ ರಾಜಕೀಯ ಪ್ರವೇಶಿಸಿ, ಬೇರೂರುವುದು ಸುಲಭ ಆಗಿರಲಿಲ್ಲ. ನಮ್ಮ ನಾಯಕ ಅನಂತಕುಮಾರ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟರು. ನಾನು ಮೊದಲ ಬಾರಿಗೆ ಶಾಸಕನಾದೆ. ಇಂದು ನಮ್ಮ ಸರಕಾರ ಇದ್ದು, ಅನಂತಕುಮಾರ್ ಹೆಸರಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಎಲ್ಲ ವಿವಿಗಳಲ್ಲಿ ಸಂಸ್ಕೃತ ಕೇಂದ್ರ: ವೇದ, ಉಪನಿಷತ್, ಸಂಸ್ಕೃತ ಭಾಷೆ ಅಧ್ಯಯನಕ್ಕೆ ವಿವಿ ಸ್ಥಾಪನೆಯಾಗಲಿದ್ದು, ಈ ಸಂಬಂಧ ತಜ್ಞರ ಸಲಹೆ ಪಡೆದುಕೊಳ್ಳಲಾಗಿದೆ. ಉತ್ತಮ ಹಾಗೂ ಪ್ರಸ್ತುತವಾದ ಸಂಸ್ಕೃತ ವಿಶ್ವವಿದ್ಯಾಲಯ ಒಂದು ಕಡೆ ಸ್ಥಾಪನೆಯಾದರೂ, ಎಲ್ಲ ವಿವಿಗಳಲ್ಲಿ ಅದರ ಕೇಂದ್ರ ಆರಂಭಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಸತೀಶ್ ರೆಡ್ಡಿ, ಎಂ.ಕೃಷ್ಣಪ್ಪ, ಉಪ ಮೇಯರ್ ಮೋಹನ್ ರಾಜ್ ಹಾಗೂ ಬೇಗೂರು ಬ್ರಾಹ್ಮಣ ಸಂಘದ ಅಧ್ಯಕ್ಷ ರಾಮಕೃಷ್ಣ ಉಪಸ್ಥಿತಿರಿದ್ದರು.