ಸಿಬಿಐಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್: ಕಾರಣ ಏನು ಗೊತ್ತೇ ?
ಬೆಂಗಳೂರು, ಮಾ.17: ಆರ್.ಆರ್.ನಗರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಪಾರ್ಟ್ಮೆಂಟ್ನಲ್ಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸಿಬಿಐ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಅನರ್ಹ ಶಾಸಕ ಮುನಿರತ್ನಗೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದ ವಿಚಾರಣೆಯನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿದೆ. ಇದರಿಂದ ಮುನಿರತ್ನಗೆ ತೀವ್ರ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸಿಬಿಐ ಸೇರಿ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದಲ್ಲಿ ಪೊಲೀಸ್ ತನಿಖೆಯೇ ಲೋಪಯುಕ್ತವಾಗಿದೆ ಎಂದು ಅಭಿಪ್ರಾಯಿಸಿರುವ ಕೋರ್ಟ್, ಮುನಿರತ್ನ ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಕೇಸ್ನಲ್ಲಿ ಮುನಿರತ್ನ ಪರ ಪೋಲಿಸರು ಕೆಲಸ ಮಾಡಿದ್ದಾರೆ. ಇದು ದೇಶದ ಗಮನ ಸೆಳೆದ ಪ್ರಕರಣ, ಪಾರದರ್ಶಕ ಚುನಾವಣೆಗೆ ಸವಾಲೊಡ್ಡಿದ ಪ್ರಕರಣ ಆಗಿದ್ದರಿಂದ ಕೇಸ್ನ್ನು ಸಿಬಿಐ ತನಿಖೆ ಒಪ್ಪಿಸಬೇಕೆನ್ನುವ ಅರ್ಜಿದಾರರ ಒತ್ತಾಯ ಸರಿಯಾಗಿದೆ. ಹೀಗಾಗಿ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದು ಸೂಕ್ತ ಹಾಗೂ ನ್ಯಾಯಯುಕ್ತ ಎಂದು ಅಭಿಪ್ರಾಯಪಟ್ಟು, ನೋಟಿಸ್ ಜಾರಿಗೊಳಿಸಿತು.