ಪಡಿತರ ಚೀಟಿದಾರರಿಗೆ ತೊಗರಿಬೇಳೆ ನೀಡಲು ಸಿಎಂ ಜತೆ ಚರ್ಚೆ: ಆಹಾರ ಸಚಿವ ಕೆ.ಗೋಪಾಲಯ್ಯ
ಬೆಂಗಳೂರು, ಮಾ. 20: ಪಡಿತರ ಚೀಟಿದಾರರಿಗೆ ಅಕ್ಕಿ, ಗೋಧಿ ಜೊತೆಗೆ ಪೌಷ್ಠಿಕಾಂಶವನ್ನು ಒದಗಿಸುವ ದೃಷ್ಟಿಯಿಂದ ತೊಗರಿಬೇಳೆ ವಿತರಣೆ ಮಾಡುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಜೆಡಿಎಸ್ನ ಸದಸ್ಯ ಎ.ಟಿ.ರಾಮಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, 2020-21ನೆ ಸಾಲಿನಲ್ಲಿ ಆದ್ಯತಾ ಪಡಿತರ ಚೀಟಿ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಕುಟುಂಬಕ್ಕೆ 2 ಕೆಜಿ ಗೋಧಿಯನ್ನು ಪ್ರತಿ ತಿಂಗಳು ನೀಡಲಾಗುವುದು ಎಂದು ಘೋಷಿಸಲಾಗಿದೆ. ತಾಳೆ ಎಣ್ಣೆ, ಉಪ್ಪು ಮತ್ತು ತೊಗರಿಬೇಳೆ ವಿತರಣೆ ಈ ಹಿಂದೆಯೇ ಕೈಬಿಡಲಾಗಿದೆ ಎಂದರು.
ಆರಂಭಕ್ಕೆ ಮಾತನಾಡಿದ ಎ.ಟಿ.ರಾಮಸ್ವಾಮಿ, ಪಡಿತರ ಚೀಟಿದಾರರಿಗೆ ತಾಳೆ ಎಣ್ಣೆ, ಉಪ್ಪು ಮತ್ತು ತೊಗರಿಬೇಳೆ ನೀಡುವುದರಿಂದ ಬಡವರಿಗೆ ಪೌಷ್ಠಿಕಾಂಶ ದೊರೆಯಲಿದೆ. ಅಲ್ಲದೆ, ತಾಳೆ ಮತ್ತು ತೊಗರಿಕಾಳು ಬೆಳೆಯುವ ರೈತರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.