ಕೃಷಿ ವಿವಿ ಸಿಬ್ಬಂದಿಗೆ ಮಾ.31ರವರೆಗೆ ವೇತನ ಸಹಿತ ರಜೆ: ಬಿ.ಸಿ ಪಾಟೀಲ್
ಬೆಂಗಳೂರು, ಮಾ.23: ಕೊರೋನ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳ ಬೋಧಕ, ಬೋಧಕೇತರ ಹಾಗೂ ಗುತ್ತಿಗೆ ಆಧಾರಿತ ಸಿಬ್ಬಂದಿಗಳಿಗೆ ಮಾ.31ರವರೆಗೆ ವೇತನ ಸಹಿತ ರಜೆ ನೀಡಲು ಸೂಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಆದೇಶದ ಅನ್ವಯ ರಾಜ್ಯದ ಬೆಂಗಳೂರು, ಧಾರವಾಡ, ರಾಯಚೂರು ಹಾಗೂ ಶಿವಮೊಗ್ಗದಲ್ಲಿರುವ ನಾಲ್ಕು ವಿಶ್ವವಿದ್ಯಾಲಯಗಳ ಬೋಧಕ, ಬೋಧಕೇತರ ಹಾಗೂ ಗುತ್ತಿಗೆ ಆಧಾರಿತ ಸಿಬ್ಬಂದಿಗಳಿಗೆ ವೇತನ ಸಹಿತ ರಜೆ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ರಜೆ ಸಮಯದಲ್ಲಿ ಸಂಶೋಧನೆಗೆ ಸಂಬಂಧಿಸಿದ ಅಧ್ಯಯನದ ಪಠ್ಯಕ್ರಮವನ್ನು ಆನ್ಲೈನ್ ಮೂಲಕ ಅಭಿವೃದ್ಧಿ ಪಡಿಸುವುದು, ತದನಂತರ ಕಾಲೇಜು ನೂತನ ಶೈಕ್ಷಣಿಕ ಅಧ್ಯಯನದ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುವುದು. ಸಂಶೋಧನೆಯ ಪತ್ರಗಳು ಹಾಗೂ ಲೇಖನ ಬರೆಯುವುದು ಹಾಗೂ ಪ್ರಕಟಿಸುವುದು, ರಜೆ ಮೇಲೆ ತೆರಳುವ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಕಡ್ಡಾಯವಾಗಿ ತಮ್ಮ ದೂರವಾಣಿ ಹಾಗೂ ಇ- ಮೇಲ್ ವಿಳಾಸವನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಕುಲಸಚಿವರಿಗೆ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.