ಗ್ರಾಮಗಳ ರಸ್ತೆಗಳಿಗೆ ಮುಳ್ಳು ಹಾಕಿ ಸಂಚಾರ ನಿರ್ಬಂಧ: ತೆರವು ಕೋರಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ
ಬೆಂಗಳೂರು, ಮಾ,29: ಗ್ರಾಮಗಳ ರಸ್ತೆಗಳಿಗೆ ಮುಳ್ಳು ಹಾಕಿ ಸಂಚಾರ ನಿಬರ್ಂಧಿಸುವುದನ್ನು ಮತ್ತು ಪೊಲೀಸರು ಮನ ಬಂದಂತೆ ಲಾಠಿ ಚಾರ್ಜ್ ಮಾಡುವುದನ್ನು ಪ್ರಶ್ನಿಸಿ ವಕೀಲರೊಬ್ಬರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಲಾಕ್ ಡೌನ್ ಸಂದರ್ಭವನ್ನು ಬಳಸಿಕೊಂಡು ಕೆಲ ಪುಂಡರು ಗ್ರಾಮಗಳಿಗೆ ಪ್ರವೇಶಿಸುವ ರಸ್ತೆಗಳಲ್ಲಿ ತಂತಿ ಬೇಲಿ, ಮುಳ್ಳಿನ ಬೇಲಿಗಳನ್ನು ಹಾಕುವ ಮೂಲಕ ಜೀವನಾವಶ್ಯಕ ವಸ್ತುಗಳ ಖರೀದಿಗೂ ಮತ್ತು ವೈದ್ಯಕೀಯ ಚಿಕಿತ್ಸೆಗೆ ತೆರಳುವುದಕ್ಕೂ ತೊಂದರೆ ನೀಡುತ್ತಿದ್ದಾರೆ. ಅದೇ ರೀತಿ ಹಳ್ಳಿ ಜನ ಅಗತ್ಯಾನುಸಾರ ಪಟ್ಟಣ-ನಗರಗಳಿಗೆ ಕಾಲಿಡುತ್ತಲೇ ಪೊಲೀಸರು ಲಾಠಿ ಚಾರ್ಜ್ ನಡೆಸುತ್ತಿದ್ದಾರೆ.
ಈ ಸಮಸ್ಯೆ ನಿವಾರಿಸಲು ಸರಕಾರ ಮತ್ತು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ತುಮಕೂರು ಮೂಲದ ವಕೀಲ ಎಸ್.ರಮೇಶ್ ನಾಯಕ್ ಇ-ಮೂಲಕ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಹೈಕೋರ್ಟ್ ರಿಜಿಸ್ಟ್ರಾರ್ ಅವರು, ನಿಮ್ಮ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಯವರ ಪೀಠದ ಮುಂದೆ ಮಂಡಿಸಲಾಗುವುದು ಎಂದು ಇಮೇಲ್ ಮೂಲಕ ತಿಳಿಸಿದ್ದಾರೆ. ಈ ಅರ್ಜಿ ಮಾ.30ರ ಸೋಮವಾರದಂದು ವಿಚಾರಣೆಗೆ ಬರಲಿದೆ.