ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ ಪ್ರಜಾಪ್ರಭುತ್ವ ವಿರೋಧಿ ನಡೆ: ಎಎಪಿ ಖಂಡನೆ
ಬೆಂಗಳೂರು, ಮೇ 16: ಯಾವುದೇ ದುರಂತ ಆದರೂ ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಬಿಜೆಪಿ, ಕೊರೋನ ಸೋಂಕನ್ನು ನೆಪವಾಗಿಟ್ಟುಕೊಂಡು ಗ್ರಾಮ ಪಂಚಾಯತ್ ಚುನಾವಣೆಯನ್ನು 6 ತಿಂಗಳುಗಳ ಕಾಲ ಮುಂದೂಡುತ್ತಿರುವುದು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆ ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ತಿಳಿಸಿದೆ.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ ಎಂದು ಹೇಳುತ್ತಲೆ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯುವ ನೀಚ ಬುದ್ಧಿಯನ್ನು ಇತಿಹಾಸದುದ್ದಕ್ಕೂ ಮಾಡಿಕೊಂಡು ಬಂದಿರುವ ಶಿಸ್ತಿನ ಪಕ್ಷಕ್ಕೆ ಈ ಕೆಲಸ ಹೊಸದೇನಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ 6,012 ಗ್ರಾಮ ಪಂಚಾಯತ್ಗಳಿದ್ದು, ಕೆಲವು ಪಂಚಾಯತ್ಗಳನ್ನು ಹೊರತುಪಡಿಸಿದರೆ, ಬಹುತೇಕ ಪಂಚಾಯತ್ಗಳ ಅವಧಿ ಜೂನ್ ವೇಳೆಗೆ ಕೊನೆಯಾಗಲಿದೆ. ಲಾಕ್ಡೌನ್ ನಿಧಾನವಾಗಿ ಸಡಿಲಗೊಳ್ಳುತ್ತಿದೆ. ಈ ಹೊತ್ತಿನಲ್ಲಿ ಚುನಾವಣೆಯನ್ನು 6 ತಿಂಗಳುಗಳ ಕಾಲ ಮುಂದೂಡಲು ಚುನಾವಣಾ ಆಯೋಗಕ್ಕೆ ಈಗಾಗಲೆ ಸರಕಾರವು ಪತ್ರ ಬರೆದಿದೆ. ಚುನಾವಣಾ ಆಯೋಗದಿಂದ ಇದುವರೆವಿಗೂ ಸ್ಪಷ್ಟವಾದ ನಿರ್ಧಾರ ಪ್ರಕಟವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ ಖಾಲಿಯಾಗುವ ಸ್ಥಾನಗಳಿಗೆ ಚುನಾಯಿತ ಪ್ರತಿನಿಧಿಗಳ ಬದಲು ಆಡಳಿತ ಮಂಡಳಿಯನ್ನು ನಿಯೋಜಿಸಲು ಹೊರಟಿರುವುದು ನೋಡಿದರೆ ಸೌಹಾರ್ದಯುತವಾಗಿ ಬದುಕುತ್ತಿರುವ ಗ್ರಾಮಗಳಲ್ಲೂ ಕೋಮುವಾದವನ್ನು ಹರಡಿ ಅಧಿಕಾರ ಪಡೆಯುವ ಹುನ್ನಾರ ಕಂಡು ಬರುತ್ತಿದೆ ಎಂದು ಜಗದೀಶ್ ಸದಂ ತಿಳಿಸಿದ್ದಾರೆ.
ಈಗಾಗಲೆ ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪ್ರತಿಯೊಂದು ಗ್ರಾಮ ಪಂಚಾಯತ್ಗಳಲ್ಲಿಯೂ ನಾಮ ನಿರ್ದೇಶನ ಸದಸ್ಯರನ್ನಾಗಿಸುವ ಪ್ರಕ್ರಿಯೆ ಪಕ್ಷದಲ್ಲಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ನೆಲೆಯೆ ಇಲ್ಲದ ಬಿಜೆಪಿ ವಾಮಮಾರ್ಗದ ಮೂಲಕ ಹಣ ಹಾಗೂ ಅಧಿಕಾರವನ್ನು ಕಬಳಿಸುವ ಕೆಟ್ಟ ಚಾಳಿ ಇದಾಗಿದೆ. ಬಿಜೆಪಿ ತನ್ನ ಅಜೆಂಡಾವನ್ನು ಎಲ್ಲ ಕಡೆ ಪಸರಿಸಲು ಈ ಸಂದಿಗ್ಧ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದ್ದಾರೆ.
ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಇದುವರೆಗೂ ಒಂದು ಬಾರಿಯೂ ಬಹುಮತವನ್ನು ಪಡೆಯದೆ ಕೇವಲ ಆಪರೇಷನ್ ಕಮಲ ಎನ್ನುವ ಕೆಟ್ಟ ಸಂಪ್ರದಾಯದ ಮೂಲಕವೆ ಅಧಿಕಾರ ಹಿಡಿದಿರುವುದಲ್ಲದೆ, ಗ್ರಾಮ ಪಂಚಾಯತ್ಗಳಲ್ಲೂ ಇದೇ ರೀತಿಯ ರಾಜಕಾರಣ ಮಾಡಲು ಹೊರಟಿರುವುದನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಅಧಿಕಾರ ಹಿಡಿದ ಕಡೆಯಲ್ಲ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುವುದನ್ನೆ ಚಾಳಿ ಮಾಡಿಕೊಂಡಿರುವ ಬಿಜೆಪಿ ನಾಯಕರು, ಲಾಕ್ಡೌನ್ ವೇಳೆ ಹಂಚಲು ಇದ್ದ ಆಹಾರವನ್ನೂ ಕದ್ದು ತಮ್ಮ ಹೆಸರಿನಲ್ಲಿ ಹಂಚಿದ್ದು, ಬಿಬಿಎಂಪಿಯ ಕಡತಗಳ ಕೊಠಡಿಯನ್ನೆ ಸುಟ್ಟು ಹಾಕಿದ್ದು, ಗಣಿ ಹಗರಣ ಹೀಗೆ ಸಾಲು ಸಾಲು ಲೂಟಿ ಮಾಡಿ ಈಗ ಅಧಿಕಾರ ವಿಕೇಂದ್ರೀಕರಣ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಕೊಡಲು ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಘಪರಿವಾರದ ಸೂಚನೆಯಂತೆ ಮೂಲೆ ಮೂಲೆಯಲ್ಲಿರುವ ಬಿಜೆಪಿ ಕಾರ್ಯಕರ್ತರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸುತ್ತಿರುವುದು ನೋಡಿದರೆ ಯಾವುದೆ ನಿರ್ಧಾರದ ಮೇಲೆ ಮುಖ್ಯಮಂತ್ರಿಗಳು ನಿಯಂತ್ರಣ ಹೊಂದಿಲ್ಲ ಎನ್ನಬಹುದು. ಈ ರೀತಿಯ ಅಧಿಕಾರದ ಲಾಲಸೆಯನ್ನು ಬಿಟ್ಟು ಸಂಕಷ್ಟದಲ್ಲಿ ಇರುವ ಜನತೆಗೆ ಸಹಾಯ ಮಾಡುವ ಬುದ್ಧಿಯನ್ನು ಬೆಳೆಸಿಕೊಳ್ಳಿ ಎಂದು ಅವರು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.