ಬೆಂಗಳೂರು: ಅಂಗಡಿಗೆ ಆಕಸ್ಮಿಕ ಬೆಂಕಿ; ಮಾಲಕ ಸಜೀವ ದಹನ
ಬೆಂಗಳೂರು, ಜು.24: ಗ್ರಂಥಿಗೆ ವ್ಯಾಪಾರ ನಡೆಸುತ್ತಿದ್ದ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಅಂಗಡಿ ಮಾಲಕ ಸಜೀವವಾಗಿ ದಹನವಾಗಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಮನುಕುಮಾರ್(35) ಮೃತ ಅಂಗಡಿ ಮಾಲಕ ಎಂದು ಗುರುತಿಸಲಾಗಿದೆ.
ನಗರದ ಅವೆನ್ಯೂ ರಸ್ತೆ ಬದಿ ಹಲವು ವರ್ಷಗಳಿಂದ ಗ್ರಂಥಿಗೆ ಅಂಗಡಿ ಇಟ್ಟುಕೊಂಡಿದ್ದರು. ಎಂದಿನಂತೆ ಶುಕ್ರವಾರ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದು, ಮಧ್ಯಾಹ್ನ ಸುಮಾರು 1.30ರ ವೇಳೆಗೆ ಅಂಗಡಿಯಲ್ಲಿ ವಿದ್ಯುತ್ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಬಳಿಕ ಅಗ್ನಿ ವ್ಯಾಪಿಸಿದ ಪರಿಣಾಮ ಅಂಗಡಿ ಮಾಲಕ ಮನುಕುಮಾರ್ ಹೊರಬರಲಾಗದೆ ಅಂಗಡಿಯಲ್ಲಿಯೇ ಸಿಲುಕಿಕೊಂಡಿದ್ದಾರೆ. ಅಗ್ನಿ ಅನಾಹುತ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಒಳಪ್ರವೇಶಿಸಿದಾಗ ಮನುಕುಮಾರ್ ಸಜೀವ ದಹನವಾಗಿರುವುದು ಬೆಳಕಿಗೆ ಬಂದಿದೆ.
ಅಗ್ನಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಸದಸ್ಯಕ್ಕೆ ತಿಳಿದುಬಂದಿಲ್ಲ. ಈ ಸಂಬಂಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.