ಆ.31ರ ಮಧ್ಯರಾತ್ರಿಯಿಂದಲೇ ಕಲಾಸಿಪಾಳ್ಯ, ಕೆ.ಆರ್ ಮಾರುಕಟ್ಟೆ ಪ್ರಾರಂಭ: ಮಂಜುನಾಥ್ ಪ್ರಸಾದ್
ಬೆಂಗಳೂರು, ಆ.31: ಆ.31ರ ಮಧ್ಯರಾತ್ರಿಯಿಂದಲೇ ಕಲಾಸಿಪಾಳ್ಯ ಮಾರುಕಟ್ಟೆ ಹಾಗೂ ಕೆ.ಆರ್. ಮಾರುಕಟ್ಟೆ ವ್ಯಾಪಾರಕ್ಕೆ ಅನುವು ಮಾಡಿಕೊಡುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಸೋಮವಾರ ಕೆ.ಆರ್.ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಪರೀಶಿಲಿಸಿ ಮಾತನಾಡಿದ ಅವರು, ಕೊರೋನ ಸಂಕಷ್ಟದಿಂದಾಗಿ ಕಳೆದ ಐದು ತಿಂಗಳಿಂದ ಕೆಆರ್ ಮಾರುಕಟ್ಟೆ ಬಂದ್ ಆಗಿತ್ತು. ಆದರೆ ಆ.31ರ ಮಧ್ಯರಾತ್ರಿಯಿಂದ ಇಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಜುಲೈ ತಿಂಗಳಿಂದ ಇಲ್ಲಿಯವರೆಗೆ ಕೊರೋನ ಪಾಸಿಟಿವ್ ಪ್ರಕರಣಗಳು ಶೇ.24ರಿಂದ ಶೇ.15ಗೆ ಬಂದಿದೆ. ಜೀವ ಬಹಳ ಮುಖ್ಯ ಆದರೆ ಜೀವನ ಸಹ ಮುಖ್ಯ. ಆದ್ದರಿಂದಾಗಿ ಮಾರುಕಟ್ಟೆ ಪುನರಾರಂಭಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಈ ವೇಳೆ ಜನರು ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿರುವ ವ್ಯಾಪಾರಿಗಳು ಹಾಗೂ ಗ್ರಾಹಕರು ಮಾಸ್ಕ್ ಧರಿಸುವುದು ಕಡ್ಡಾಯವಾಗೊಳಿಸಲಾಗಿದ್ದು, ಪ್ರತಿ ಅಂಗಡಿಯವರು ಪ್ರತ್ಯೇಕ ಸ್ಯಾನಿಟೈಸರ್ ಇಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು