ಸೆ.15ಕ್ಕೆ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ: ನಟಿ ಭಾರತಿ
ಬೆಂಗಳೂರು, ಸೆ. 9: ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ನಟ ವಿಷ್ಣವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸೆ.15ರಂದು ಭೂಮಿ ಪೂಜೆ ನೆರವೇರಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನಟಿ ಹಾಗೂ ವಿಷ್ಣು ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಇಂದಿಲ್ಲಿ ಆಹ್ವಾನ ನೀಡಿದ್ದಾರೆ.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅವರನ್ನು ಖುದ್ದು ಭೇಟಿ ಮಾಡಿದ ಭಾರತಿ ವಿಷ್ಣುವರ್ಧನ್ ಹಾಗೂ ನಟ ಅನಿರುದ್ಧ್ ಅವರು, ವಿಷ್ಣು ಸ್ಮಾರಕ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸುವಂತೆ ಮನವಿ ಮಾಡಿದರು. ಅನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಭಾರತಿ, 11ನೆ ವರ್ಷದ ವಿಷ್ಣುವರ್ಧನ್ ಪುಣ್ಯಸ್ಮರಣೆಗೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲು ಬಂದಿದ್ದೇವೆ ಎಂದು ತಿಳಿಸಿದರು.
ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗುತ್ತಿದ್ದು, ಸೆ.15ರಂದು ಸ್ಮಾರಕದ ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೂಕ್ತ ಭದ್ರತೆ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಕೊರೋನ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಗುದ್ದಲಿ ಪೂಜೆಗೆ ಬರಲು ಆಗುತ್ತಿಲ್ಲ. ಹೀಗಾಗಿ ಅವರು ಆನ್ಲೈನ್ ಮೂಲಕವೇ ವಿಷ್ಣು ಸ್ಮಾರಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ಮಾತನಾಡಿದ ನಟ ಅನಿರುದ್ಧ್, ನಮಗೆ ಡ್ರಗ್ಸ್ ಮಾಫಿಯಾ, ಡ್ರಗ್ಸ್ ಜಾಲದ ಬಗ್ಗೆ ಅರಿವಿಲ್ಲ. ಈ ವಿಚಾರ ಮನಸ್ಸಿಗೆ ತುಂಬಾ ಬೇಸರ ತರುತ್ತಿದೆ. ಇಂತಹ ಪೀಡೆ ಇಡೀ ಜಗತ್ತಿನಿಂದಲೇ ತೊಲಗಬೇಕು. ಇದರಿಂದ ಕೋಟ್ಯಂತರ ಯುವಪೀಳಿಗೆಯನ್ನು ರಕ್ಷಿಸಿದಂತಾಗುತ್ತದೆ. ಸರಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಮನವಿ ಮಾಡಿದರು.