ಮದ್ರಸ ಆಧುನೀಕರಣದ ದ್ವಿತೀಯ ಉಲಮಾ ಸಭೆ ಭಾಗಶಃ ಯಶಸ್ವಿ: ಶಾಫಿ ಸಅದಿ
ಬೆಂಗಳೂರು : ಧಾರ್ಮಿಕ ಶಿಕ್ಷಣ ಕೇಂದ್ರಗಳಾಗಿ ಕಾರ್ಯಾಚರಿಸುತ್ತಿರುವ ವಸತಿ ಮದ್ರಸಗಳನ್ನು (ಉನ್ನತ ಶಿಕ್ಷಣ ಸಂಸ್ಥೆ) ಆಧುನೀಕರಣಗೊಳಿಸುವ ಕೇಂದ್ರ ಸರಕಾರದ 'ಸ್ಕೀಮ್ ಫಾರ್ ಕ್ವಾಲಿಟಿ ಎಜುಕೇಶನ್ ಇನ್ ಮದ್ರಸಾಸ್ (ಎಸ್ ಕ್ಯೂಇಎಮ್) ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ರಾಜ್ಯ ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿ ಹಾಗೂ ವಕ್ಫ್ ಅಧಿಕಾರಿಗಳ ನೇತೃತ್ವದಲ್ಲಿ ರಾಜ್ಯ ವಕ್ಫ್ ಮಂಡಳಿಯಲ್ಲಿ ನಡೆದ ದ್ವಿತೀಯ ಸುತ್ತಿನ ಉಲಮಾ ಸಭೆ ಭಾಗಶಃ ಯಶಸ್ವಿಯಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿ ಸದಸ್ಯ ಎನ್.ಕೆ.ಎಂ. ಶಾಫಿ ಸಅದಿ ತಿಳಿಸಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು 11ನೇ ಹಣಕಾಸು ಯೋಜನೆಯಲ್ಲಿ ಈ ಮದ್ರಸ ಆಧುನೀಕರಣ ಯೋಜನೆಯು ಘೋಷಣೆಯಾಗಿತ್ತು. ಆ ಯೋಜನೆಯು ಈಗ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ವರ್ಗಾವಣೆಗೊಂಡಿರುತ್ತದೆ. ಔಪಚಾರಿಕ ಶಿಕ್ಷಣ (NIOS) ನೀಡಲು ಸಿದ್ಧವಿರುವ ಸಂಸ್ಥೆಗಳಿಗೆ ಕಟ್ಟಡ, ತರಗತಿ ಕೊಠಡಿ, ಸ್ಮಾರ್ಟ್ ಕ್ಲಾಸ್, ಸೈನ್ಸ್ ಕಿಟ್, ಬುಕ್ , ಶಿಕ್ಷಕರ ವೇತನ, ಬ್ಯಾಂಕ್ ಗಳಿಗಾಗಿ ಹಣಕಾಸಿನ ನೆರವು ಈ ಯೋಜನೆಯಿಂದ ಲಭ್ಯ ಇದೆ. ಈ ಮಹತ್ವಪೂರ್ಣ ಯೋಜನೆಯ ಸಸೂತ್ರ ಜಾರಿಗಾಗಿ ಎರಡನೇ ಉಲಮಾ ಸಭೆಯಲ್ಲಿ ವಕ್ಫ್ ಬೋರ್ಡ್ ಸದಸ್ಯಅಡ್ವಕೇಟ್ ಆಸಿಫ್ ಅಲಿ, ಮೌಲಾನ ತನ್ವೀರ್ ಹಾಷ್ಮಿ ಬಿಜಾಪುರ, ಮೌಲಾನಾ ಇಫ್ತಿಕಾರ್ ಖಾಸ್ಮಿ ಬೆಂಗಳೂರು, ತ್ವಾಕ ಅಹ್ಮದ್ ಮುಸ್ಲಿಯಾರ ಮಂಗಳೂರು, ಮೌಲಾನ ಇಮ್ರಾನ್ ಮಕ್ಸೂದ್, ಮೌಲಾನ ವಹೀದುದ್ದೀನ್ ಉಮ್ರಿ, ಮೌಲಾನ ಅಬ್ದುಲ್ಲ ಕುಂಞಿ, ಮೌಲಾನ ಇಜಾಝ್ ಅಹ್ಮದ್, ಮೌಲಾನ ಶಬೀರ್ ನದ್ವಿ, ರಾಜ್ಯ ವಕ್ಫ್ ಬೋರ್ಡ್ ಸಿಇಒ ಮುಹಮ್ಮದ್ ಯೂಸುಫ್ ಸಭೆಯಲ್ಲಿ ಉಪಸ್ಥಿತರಿದ್ದರು.
ಮುಂದಿನ ಹಂತದ ಸಭೆಯಲ್ಲಿ ಇನ್ನಷ್ಟು ವಿಸ್ತೃತವಾಗಿ ಚರ್ಚಿಸಲಾಗುವುದು. ನ್ಯಾಷನಲ್ ಇನ್ಸ್ ಟಿಟ್ಯೂಷನ್ ಫಾರ್ ಓಪನ್ ಸ್ಕೂಲಿಂಗ್ (NIOS) ಸಿಲಬಸನ್ನು ಮದ್ರಸ (ಉನ್ನತ ದರ್ರ್ಸ್ )ಸಿಲಬಸ್ನೊಂದಿಗೆ ಅಳವಡಿಸಿದರೆ ಧಾರ್ಮಿಕ ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರ ಬಹುದೆಂಬ ವಿಷಯದಲ್ಲಿ ಚರ್ಚೆ ನಡೆದಿದೆ. ಈ ಯೋಜನೆಯ ಸದುಪಯೋಗ ಪಡೆಯಲು ಧಾರ್ಮಿಕ ಉನ್ನತ ಶಿಕ್ಷಣ ನೀಡುವ ಆಡಳಿತ ಮಂಡಳಿಗಳು ಸಿದ್ಧತೆ ಮಾಡಿಸಿಕೊಳ್ಳಬೇಕು ಎಂದು ಶಾಫಿ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.