ವಿಧಾನಸಭೆ ಕಲಾಪ: ಮಾಸ್ಕ್ ಧರಿಸಿ ಮಾತನಾಡಲು ಎಲ್ಲ ಸದಸ್ಯರಿಗೆ ಸ್ಪೀಕರ್ ಸೂಚನೆ
ಬೆಂಗಳೂರು,ಸೆ.24: ಕೊರೋನ ವೈರಸ್ ಸೋಂಕು ನಿಯಂತ್ರಣ ದೃಷ್ಟಿಯಿಂದ ಸದನದಲ್ಲಿ ಎಲ್ಲ ಸದಸ್ಯರು ತಪ್ಪದೆ ಮಾಸ್ಕ್ ಧರಿಸಿ ಮಾತನಾಡಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಸೂಚನೆ ನೀಡಿದ್ದಾರೆ.
ಗುರುವಾರ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ನಿನ್ನೆ ನಿಧನರಾದ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಚನ್ನಬಸಪ್ಪ ಅಂಗಡಿ ಅವರಿಗೆ ಸದನದಲ್ಲಿ ಸಂತಾಪ ಸೂಚಿಸಿ ಮಾತನಾಡುತ್ತಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಮಾಸ್ಕ್ ಧರಿಸದಿರುವುದನ್ನು ಕಂಡ ಸ್ಪೀಕರ್, `ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು.
`ಅಕ್ಕಪಕ್ಕ ಯಾರೂ ಇಲ್ಲ ಮಾಸ್ಕ್ ಹಾಕಿಕೊಂಡು ಮಾತನಾಡುವ ಅಗತ್ಯವಿಲ್ಲ' ಎಂದು ಮಾಧುಸ್ವಾಮಿ ಪ್ರತಿಕ್ರಿಯಿಸಿದರು. ಅದಕ್ಕೆ ಒಪ್ಪದ ಸ್ಪೀಕರ್, ಎಲ್ಲರೂ ಮಾಸ್ಕ್ ಧರಿಸಿಯೇ ಮಾತನಾಡಬೇಕು. ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ಮಾಸ್ಕ್ ಧರಿಸುವುದು ಅಗತ್ಯ. ಹೀಗಾಗಿ ಮಾಸ್ಕ್ ಧರಿಸಿ ಎಂದು ಸೂಚಿಸಿದಾಗ ಸಚಿವ ಮಾಧುಸ್ವಾಮಿ ಮಾಸ್ಕ್ ಧರಿಸಿ ಮಾತನಾಡಲು ಆರಂಭಿಸಿದರು.
Next Story