ಬೆಂಗಳೂರು ನಗರದಲ್ಲಿನ ಅನಧಿಕೃತ ಮನೆಗಳ ಸಕ್ರಮಕ್ಕೆ 'ಬಿಡಿಎ ತಿದ್ದುಪಡಿ ಮಸೂದೆ' ಅಂಗೀಕಾರ
ಬೆಂಗಳೂರು, ಸೆ. 25: ಬೆಂಗಳೂರು ನಗರದಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ `ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕ ಸೇರಿದಂತೆ ಒಟ್ಟು ಆರು ವಿಧೇಯಕಗಳಿಗೆ ವಿಧಾನಸಭೆ ಧ್ವನಿಮತದ ಒಪ್ಪಿಗೆ ನೀಡಿತು.
ಶುಕ್ರವಾರ ವಿಧಾನಸಭೆಯಲ್ಲಿ ಶಾಸನ ರಚನಾ ಕಲಾಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪರವಾಗಿ ಮಸೂದೆಯನ್ನು ಮಂಡಿಸಿದ ಕಾನೂನು ಸಚಿವ ಮಾಧುಸ್ವಾಮಿ, ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಅನುಭೋಗದಲ್ಲಿರುವವರಿಗೆ ಒಂದು ಅವಧಿಗೆ ದಂಡವನ್ನು ಪಡೆದು ಅವುಗಳನ್ನು ಸಕ್ರಮಕ್ಕೆ ಅವಕಾಶ ಕಲ್ಪಿಸಲು ಈ ಕಾಯ್ದೆ ತರಲಾಗಿದೆ. ನಿವೇಶನದ ಅಳತೆಯನ್ನು ಆಧರಿಸಿ ಮಾರ್ಗಸೂಚಿ ದರದ ಶೇ.10ರಿಂದ ಶೇ.50ರಷ್ಟು ದಂಡ ವಿಧಿಸಿ ಅವುಗಳನ್ನು ಸಕ್ರಮಕ್ಕೆ ತಿದ್ದುಪಡಿ ಮಸೂದೆ ತರಲಾಗಿದೆ ಎಂದರು.
ಈ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಜೆಡಿಎಸ್ನ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, ಸರಕಾರ ಬಿಡಿಎ ಮಸೂದೆಗೆ ತಿದ್ದುಪಡಿ ತಂದಿರುವುದು ಬಡವರ ಹಿತಕ್ಕಾಗಿ ಅಲ್ಲ. ಬದಲಿಗೆ ಬಲಾಢ್ಯರು, ಅಕ್ರಮ ಮಾಡುವವರಿಗೆ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ತಂದಿದೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಲಾಢ್ಯರಿಗೆ ಅತ್ಯಂತ ಅಗ್ಗದ ದರದಲ್ಲಿ, ಮಾರುಕಟ್ಟೆ ದರವೂ ಅಲ್ಲ, ಮಾರ್ಗಸೂಚಿ ದರದ ಶೇ.10, 20, 30ರಷ್ಟು ದರ ನಿಗದಿ ಮಾಡಿ ಸಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಬಿಬಿಎಂಪಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರಕಾರ ಈ ಮಸೂದೆ ತಂದಿದೆ. ಲೂಟಿಕೋರರಿಗೆ ಅವಕಾಶ ನೀಡುವ ಈ ಮಸೂದೆಯನ್ನು ನಾನು ಒಪ್ಪುವುದಿಲ್ಲ ಎಂದು ವಿಧೇಯಕವನ್ನು ರಾಮಸ್ವಾಮಿ ವಿರೋಧಿಸಿದರು.
ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಹಿರಿಯ ಸದಸ್ಯ ಕೆ.ಜಿ.ಬೋಪಯ್ಯ, ಒತ್ತುವರಿ ತೆರವು ಸಮಿತಿ ಅಧ್ಯಕ್ಷನಾಗಿ ಈ ಬಗ್ಗೆ ನಾನು ಪರಿಶೀಲನೆ ನಡೆಸಿದ್ದು, ಸರಕಾರ ನಮ್ಮ ಶಿಫಾರಸ್ಸುಗಳನ್ನು ಒಪ್ಪಿಕೊಂಡಿಲ್ಲ. ನಗರದಲ್ಲಿ ಬಲಾಢ್ಯರೇ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದ ಇತರ ನಗರಗಳಲ್ಲೂ ಇಂತಹದ್ದೇ ಸಮಸ್ಯೆ ಇರುವುದರಿಂದ ಇದೇ ಮಾದರಿಯ ಕಾನೂನು ಅಲ್ಲಿಗೂ ಜಾರಿ ಮಾಡಬೇಕು ಎಂದು ಕೆಲ ಸದಸ್ಯರು ಆಗ್ರಹಿಸಿದರು.
`ತಮ್ಮ ಜಿಲ್ಲೆಗಳಲ್ಲಿ ಒತ್ತವರಿ ಸಕ್ರಮ ಮಾಡಬೇಕು. ಬೆಂಗಳೂರು ನಗರದಲ್ಲಿ ಮಾತ್ರ ಏಕೆ ಬೇಡ' ಎಂದು ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದರು. ಈ ಗದ್ದಲದ ಮಧ್ಯೆ ಸ್ಪೀಕರ್ ಕಾಗೇರಿ ಅವರು ವಿಧೇಯಕವನ್ನು ಮತಕ್ಕೆ ಹಾಕಿದಾಗ ಮಸೂದೆಗೆ ಧ್ವನಿಮತದ ಅಂಗೀಕಾರ ದೊರೆಯಿತು.
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ವಿಧೇಯಕ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ(ಮೂರನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ನಗರ ಪಾಲಿಕೆಗಳ(ಎರಡನೆ ತಿದ್ದುಪಡಿ) ವಿಧೇಯಕ-2020 ಸೇರಿದಂತೆ ಒಟ್ಟು ಆರು ವಿಧೇಯಕಗಳಿಗೆ ಧ್ವನಿಮತದ ಮೂಲಕ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು.