ಬಿಬಿಎಂಪಿಯವರು ಖಾಸಗಿ ಆಸ್ಪತ್ರೆಗೆ ಸೇರಿಸಿ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ: ಕೊರೋನ ಸೋಂಕಿತನ ಅಳಲು
1 ಲಕ್ಷ ರೂ. ಬಿಲ್ ಕಟ್ಟಲು ಹೇಳಿದ ಆಸ್ಪತ್ರೆ: ಆರೋಪ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.29: ಬಿಬಿಎಂಪಿ ಅಧಿಕಾರಿಗಳ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕೊರೋನ ಸೋಂಕಿತನೋರ್ವ ಹಣ ಕಟ್ಟಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾನೆ.
ದೊಡ್ಡಕನ್ನಮಂಗಲದ ನಿವಾಸಿ ಶ್ರೀನಿವಾಸ್ ಎಂಬುವವರು ಕೊರೋನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಬಿಬಿಎಂಪಿ ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಅಧಿಕಾರಿಗಳು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಕೊರೋನ ನೆಗೆಟಿವ್ ವರದಿ ಬಂದಿದ್ದು, ಮನೆಗೆ ಹೋಗುವಂತೆ ತಿಳಿಸಿದ್ದಾರೆ.
ಆದರೆ ಆಸ್ಪತ್ರೆಯವರು ಶ್ರೀನಿವಾಸ್ಗೆ 1 ಲಕ್ಷ ರೂ. ಹಣ ಕಟ್ಟಿ ಮನೆಗೆ ತೆರಳುವಂತೆ ಹೇಳಿದ್ದಾರೆ. ಈ ಕುರಿತು ಶ್ರೀನಿವಾಸ್ ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಸ್ಪಂದನ ಸಿಕ್ಕಿಲ್ಲ ಎಂದು ಆರೋಪಿಸಿಲಾಗಿದೆ.
ನಾನು ಸರಕಾರಿ ಆಸ್ಪತ್ರೆಗೆ ಹೋಗಲು ಸಿದ್ಧನಿದ್ದೆ. ಆದರೆ ಬಿಬಿಎಂಪಿಯವರು ಖಾಸಗಿ ಆಸ್ಪತ್ರೆಗೆ ಸೇರಿಸಿ, ಇದೀಗ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ. ನಾಲ್ಕು ದಿನಗಳ ಹಿಂದೆಯೇ ಡಿಸ್ಚಾರ್ಜ್ ಮಾಡಿದರೂ ಮನೆಗೆ ಹೋಗಲು ಆಗುತ್ತಿಲ್ಲ. ಆರಂಭದಲ್ಲಿ ನಿಮ್ಮ ವೆಚ್ಚವನ್ನು ನಾವೇ ಭರಿಸುತ್ತೇವೆಂದು ಹೇಳಿದರು. ಇದೀಗ ನಮ್ಮ ಕರೆಗೂ ಸ್ಪಂದಿಸದೆ ಇದ್ದಾರೆ. ದಯವಿಟ್ಟು ಆರೋಗ್ಯ ಸಚಿವರೇ ನನ್ನನ್ನು ಬಿಡುಗಡೆ ಮಾಡಿಸಿ ಎಂದು ಅಳಲು ತೋಡಿಕೊಂಡಿದ್ದಾರೆ.