ಬೆಂಗಳೂರು: ಇಬ್ಬರು ಶಂಕಿತ ಉಗ್ರರ ಸೆರೆ
ಬೆಂಗಳೂರು, ಅ.8: ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಡಿ ಇಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಬೆಂಗಳೂರು ಫ್ರೇಜರ್ ಟೌನ್ ನಿವಾಸಿ ಇರ್ಫಾನ್ ನಾಸೀರ್ ಸತ್ತಾರ್ (33) ಹಾಗೂ ತಮಿಳಿನಾಡಿನ ರಾಮನಾಥಪುರದ ಅಹ್ಮದ್ ಅಬ್ದುಲ್ ಖಾದೆರ್ (40) ಬಂಧಿತರು ಎಂದು ಎನ್ಐಎ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆಯಲಾಗಿದೆ. ಇಬ್ಬರ ಪೈಕಿ ಇರ್ಫಾನ್, ಅಕ್ಕಿ ವ್ಯಾಪಾರಿ ಆಗಿದ್ದ ಎನ್ನಲಾಗಿದೆ. ಇನ್ನು, ಚೆನ್ನೈನ ಬ್ಯಾಂಕೊಂದರಲ್ಲಿ ಅಹ್ಮದ್ ಅಬ್ದುಲ್ ಖಾದೆರ್, ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ನಗರದ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಡಾ.ಅಬ್ದುಲ್ ರೆಹ್ಮಾನ್ ಎಂಬಾತನನ್ನು ಬಸವನಗುಡಿಯಲ್ಲಿ ಎನ್ಐಎ ತನಿಖಾಧಿಕಾರಿಗಳು ಬಂಧಿಸಿದ್ದರು. ಇದಾದ ಬಳಿಕ ಗುರಪ್ಪನಪಾಳ್ಯ ಹಾಗೂ ಫ್ರೇಜರ್ಟೌನ್ನಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿದ್ದ ಎನ್ಐಎ ಅಧಿಕಾರಿಗಳು, ಇಬ್ಬರೂ ಶಂಕಿತ ಉಗ್ರರನ್ನು ಬಂಧಿಸಿ, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.