ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಕಿಸಾನ್ ಸಂಘದಿಂದ ಪ್ರತಿಭಟನೆ
ಬೆಂಗಳೂರು: ಅ.10: ಬಿಜೆಪಿ ಪಕ್ಷದ ಅಂಗವಾಗಿ ಕೆಲಸ ಮಾಡುವ ಭಾರತೀಯ ಕಿಸಾನ್ ಸಂಘದ ವತಿಯಿಂದ ರಾಜ್ಯ ಸರಕಾರದ ಜನವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ನಗರದ ಬಿಜೆಪಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.
ನಗರದ ಮಲ್ಲೇಶ್ವರಂ ವೃತ್ತದಿಂದ ಬಿಜೆಪಿ ಕಚೇರಿಗೆ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಸರಕಾರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ಮುಂದಾಗಿರುವ ಕ್ರಮವನ್ನು ಖಂಡಿಸಿದರು.
ರಾಜ್ಯ ಸರಕಾರವು ಏಕಾಏಕಿ ಆತುರ ನಿರ್ಧಾರ ಕೈಗೊಂಡು ಕಾಯ್ದೆ ಜಾರಿಗೆ ಮುಂದಾಗಿರುವ ಕ್ರಮ ಸರಿಯಲ್ಲ. ರೈತರ ಜೊತೆ ಸಮಾಲೋಚನೆ ನಡೆಸಿ ತಿದ್ದುಪಡಿ ತರಬೇಕಾಗಿತ್ತು. ಆದರೆ, ಯಾವುದೇ ಸಮಾಲೋಚನೆ ನಡೆಸದೇ ಭೂ ಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರವು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಬಡರೈತರನ್ನು ಬೀದಿಪಾಲು ಮಾಡಲು ಮುಂದಾಗಿದೆ. ತಮ್ಮ ಸ್ವಂತ ಜಮೀನುಗಳಲ್ಲಿಯೇ ರೈತರನ್ನು ಕೂಲಿಯಾಳುಗಳನ್ನಾಗಿ ಮಾಡುವಂತಹ ಹುನ್ನಾರ ಸರಿಯಲ್ಲ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಂಘದ ರಾಜ್ಯಾಧ್ಯಕ್ಷ ಪಿ.ಎಸ್.ಪುಟ್ಟಸ್ವಾಮಿ ಹೇಳಿದ್ದಾರೆ.
ಸರಕಾರವು ಕಾಯ್ದೆಯನ್ನು ತಿದ್ದುಪಡಿ ಮಾಡಿ 79ಎ, ಬಿ, ಸಿ ಮತ್ತು 80 ನೇ ಕಲಂಗಳನ್ನು ರದ್ದುಗೊಳಿಸಲಾಗಿದೆ. ಈ ಕಾಯ್ದೆ ಕುರಿತು ಹಲವು ಹಂತದ ಹೋರಾಟಗಳನ್ನು ಮಾಡಲಾಗುತ್ತಿದೆ. ಆದರೆ, ಈ ರೈತ ಹೋರಾಟಗಳಿಗೆ ಸರಕಾರ ಬೆಲೆ ಕೊಡದೇ, ಸದನದಲ್ಲಿ ನಡೆದ ಚರ್ಚೆಗೂ ಮನ್ನಣೆ ನೀಡದಿರುವುದು ದುರದೃಷ್ಟಕರ ಸಂಗತಿ ಎಂದು ಅವರು ಆಪಾದಿಸಿದರು.
ಸದನದಲ್ಲಿ ಕಾಯ್ದೆಗೆ ಅವಕಾಶ ಸಿಗದ ಕಾರಣ ಮತ್ತೊಂದು ಬಾರಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ಮುಂದಾಗಿರುವುದು ಸರಿಯಲ್ಲ. ಸರಕಾರ ರೈತ ಸಂಘಟನೆಗಳೊಂದಿಗೆ ಮುಖಾಮುಖಿ ಚರ್ಚೆ ಮಾಡಬೇಕು, ಎಲ್ಲರ ಅಭಿಪ್ರಾಯ ಪಡೆದು ಮುಂದೆ ಹೆಜ್ಜೆ ಇಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಸರಕಾರವು ಕಾಯ್ದೆಯ ಮೂಲಕ ರೈತರ ಜಮೀನನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಈ ಬಗ್ಗೆ ಗಟ್ಟಿಯಾಗಿ ದ್ವನಿ ಎತ್ತಲು ಪ್ರತಿಪಕ್ಷಗಳು ವಿಫಲವಾಗಿವೆ. ಇತ್ತ ಸರಕಾರಕ್ಕೆ ಜೀವವಿಲ್ಲ. ರೈತರ ಹೆಸರು ಹೇಳಿ ಮುಖ್ಯಮಂತ್ರಿಗಳಾಗಿದ್ದೀರಿ. ಹೀಗಾಗಿ ರೈತರ ಮಾತಿಗೆ ಮನ್ನಣೆ ನೀಡಿ ಕೂಡಲೇ ತಿದ್ದುಪಡಿ ಸುಗ್ರೀವಾಜ್ಞೆ ಹಿಂಪಡೆಯುವಂತೆ ಒತ್ತಾಯಿಸಿದರು.