ಹೂಡಿಕೆ ನೆಪದಲ್ಲಿ ಹಣ ವಂಚನೆ ಆರೋಪ: ದಂಪತಿ ಬಂಧನ
ಬೆಂಗಳೂರು, ಅ.15: ಕಂಪೆನಿಯೊಂದರಲ್ಲಿ ಹಣ ಹೂಡಿಕೆ ಮಾಡಿಕೊಳ್ಳುವ ನೆಪದಲ್ಲಿ ವಂಚಿಸಿರುವ ಆರೋಪದಡಿ ದಂಪತಿಯನ್ನು ಇಲ್ಲಿನ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸುಮೀಜಾ ಹಾಗೂ ಮುರಳಿ ಕೃಷ್ಣನ್ ಬಂಧಿತ ದಂಪತಿ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?: ಕಂಪೆನಿಯೊಂದರ ಮುಖ್ಯ ಸಂಚಾಲಕರಾಗಿರುವ ವಿಶ್ವನಾಥಂ ಪೆಡ್ಡಿ ಎಂಬುವವರು ಹ್ಯಾಪಿ ಕೌ ಆರ್ಗಾನಿಕ್ಸ್ ಎಂಬ ಕಂಪೆನಿಯನ್ನು ನಡೆಸುತ್ತಿದ್ದ ಸುಮೀಜಾ ಮತ್ತು ಮುರುಳಿ ಕೃಷ್ಣನ್ ಅವರಿಗೆ ಹಣ ನೀಡಿದ್ದಾರೆ.
ಸೂಪರ್ ಮಾರ್ಕೆಟ್ಗೆ ಹಣ ಹೂಡಿಕೆ ಮಾಡಿ, ಲಾಭಾಂಶ ಕೊಡುವುದಾಗಿ ದಂಪತಿ ನಂಬಿಸಿ ವಿಶ್ವನಾಥಮ್ ಪೆಡ್ಡಿ ಅವರಿಂದ ಮೊದಲಿಗೆ 50 ಲಕ್ಷ ರೂ. ವಸೂಲಿ ಮಾಡಿದ್ದಾರೆ. ತದನಂತರ, ಹಂತ ಹಂತವಾಗಿ ಮತ್ತೆ 30 ಲಕ್ಷ ರೂ. ವಸೂಲಿ ಮಾಡಿಕೊಂಡು, ಸಂಪರ್ಕಕ್ಕೆ ದೊರೆಯದೆ, ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.
ಈ ಸಂಬಂಧ ವಿಶ್ವನಾಥಂ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
Next Story