ಜಾತಿ ಮೇಲೆ ರಾಜಕೀಯ ಮಾಡಲು ಇಷ್ಟ ಇಲ್ಲ: ಡಿ.ಕೆ ಶಿವಕುಮಾರ್
ಬೆಂಗಳೂರು: 'ನನಗೆ ಮುಂಚಿನಿಂದಲೂ ಜಾತಿ ಮೇಲೆ ರಾಜಕೀಯ ಮಾಡಲು ಇಷ್ಟ ಇಲ್ಲ. ನಾನು ಕೆಪಿಸಿಸಿ ಅಧ್ಯಕ್ಷ. ನನಗೆ ಕಾಂಗ್ರೆಸ್ ಪಕ್ಷವೇ ಒಂದು ಜಾತಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
ಕುಮಾರಸ್ವಾಮಿ ಅವರು ನನ್ನ ಹೆಸರು ಹೇಳಿ ಟೀಕೆ ಮಾಡಿಲ್ಲ. ಅವರು ನನ್ನ ಬಗ್ಗೆ ಯಾಕೆ ಟೀಕೆ ಮಾಡುತ್ತಿದ್ದಾರೆ. ಸುಮ್ಮನೆ ಇಲ್ಲಸಲ್ಲದು ಹೇಳಬೇಡಿ. ಅವರ ಪಕ್ಷ ಅವರದು, ನಮ್ಮ ಪಕ್ಷ ನಮ್ಮದು. ಅವರ ಕರ್ತವ್ಯ ಅವರು ಮಾಡುತ್ತಾರೆ, ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಕುಮಾರಸ್ವಾಮಿ ಅವರು ಕೊಡುವ ಸಲಹೆಯನ್ನು ನಾನು ಸ್ವೀಕಾರ ಮಾಡುತ್ತೇನೆ.
ಮತ ಸೆಳೆಯುವ ರಾಜಕೀಯ ಸಹಜ
ಚುನಾವಣೆ ಸಂದರ್ಭದಲ್ಲಿ ಒಂದು ಪಕ್ಷ ಬೇರೆ ಪಕ್ಷಗಳ ಮತ ಸೆಳೆಯುವುದು ಸಹಜ. ಜೆಡಿಎಸ್ ನವರು ನಮ್ಮ ಮತಗಳನ್ನು, ಬಿಜೆಪಿ ಮತಗಳನ್ನು ಸೆಳೆಯುತ್ತಾರೆ. ಅದೇ ರೀತಿ ನಾವು ಕೂಡ ಬಿಜೆಪಿ, ಜೆಡಿಎಸ್ ಹಾಗೂ ಬೇರೆ ಪಕ್ಷಗಳ ಮತ ಸೆಳೆಯಲು ಪ್ರಯತ್ನಿಸುತ್ತೇವೆ. ನಮ್ಮ ಅಭ್ಯರ್ಥಿ, ಪಕ್ಷದ ಸಿದ್ಧಾಂತ, ನಾಯಕತ್ವ ನೋಡಿ ಯಾರು ಪಕ್ಷಕ್ಕೆ ಬರುತ್ತಾರೋ ನಾವು ಅವರನ್ನು ಕರೆದುಕೊಳ್ಳುತ್ತಿದ್ದೇವೆ. ಚುನಾವಣೆ ಸಮಯದಲ್ಲಿ ಇಂತಹ ರಾಜಕೀಯ ಸಹಜ.
ನಾನು ಒಂದು ಜಾತಿಗೆ ಸೀಮಿತವಾಗಿ ಅದರ ಮೇಲೆ ರಾಜಕೀಯ ಮಾಡುವುದಿಲ್ಲ. ನನ್ನ ತಂದೆ ತಾಯಿ ಒಕ್ಕಲಿಗರು. ನಾನು ಮೂಲತಃ ಕೃಷಿಕ ಹೀಗಾಗಿ ನಾನು ಒಕ್ಕಲಿಗ. ಶಾಲೆಯಲ್ಲಿ ಅರ್ಜಿ ನೀಡುವಾಗ ಒಕ್ಕಲಿಗ ಎಂದು ಕೊಟ್ಟಿದ್ದೇನೆ. ಆದರೆ ಜಾತಿ ಮೇಲೆ ರಾಜಕೀಯ ಮಾಡಲ್ಲ. ನಮಗೆ ಪಕ್ಷವೇ ಜಾತಿ.' ಎಂದು ಡಿಕೆಶಿ ಹೇಳಿದರು.