ಬೆಂಗಳೂರು ಗಲಭೆ ಪ್ರಕರಣ: ತನ್ನ 'ಪ್ರಚೋದನಕಾರಿ ಪೋಸ್ಟ್' ಬಗ್ಗೆ ನವೀನ್ ಹೇಳಿದ್ದು ಹೀಗೆ...
ಬೆಂಗಳೂರು, ಅ.23: ಡಿಜೆ-ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಆರೋಪಿ ನವೀನ್, ಗಲಭೆಗೆ ಕಾರಣವಾಗಿರುವ ಪ್ರಚೋದನಕಾರಿ ಪೋಸ್ಟ್ ಹಾಕಿದ್ದು ತಪ್ಪು ಎಂದು ತಿಳಿಸಿದ್ದಾನೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ನವೀನ್, ನಾನು ಆ ಪೋಸ್ಟ್ ಹಾಕಿದ್ದು ತಪ್ಪು. ಇದು ತಪ್ಪು ಎಂದು ಒಪ್ಪಿಕೊಳ್ಳುತ್ತೇನೆ. ನನ್ನಿಂದ ಸಾರ್ವಜನಿಕರಿಗೆ ಹಾಗೂ ಹಲವರಿಗೆ ಸಮಸ್ಯೆಯಾಗಿದೆ. ಈ ವಿಚಾರವಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾನೆ.
ಉದ್ದೇಶಪೂರ್ವಕವಾಗಿ ಈ ವಿವಾದಿತ ಪೋಸ್ಟ್ ಹಾಕಿರಲಿಲ್ಲ. ಇದಕ್ಕೂ ಮೊದಲು ಫಿರೋಝ್ ಎಂಬಾತ ನನ್ನನ್ನು ಗುರಿಯಾಗಿಸಿಕೊಂಡು ಒಂದು ಕೋಮಿಗೆ ನೋವು ಉಂಟಾಗುವ ಸಂದೇಶವನ್ನು ಹರಿಬಿಟ್ಟಿದ್ದ. ಇದಕ್ಕೆ ಉತ್ತರಿಸುವ ವೇಗದಲ್ಲಿ ನಾನು ಸಹ ಆ ಪೋಸ್ಟ್ ಅನ್ನು ಹಾಕಿದ್ದೆ. ಇದು ಇಷ್ಟೊಂದು ದೊಡ್ಡ ಗಲಭೆ ಆಗಲಿದೆ ಎಂದು ಊಹೆಯೇ ಮಾಡಿರಲಿಲ್ಲ ಎಂದಿದ್ದಾನೆ.
ಪುಲಿಕೇಶಿನಗರದ ಹಿಂದೂ-ಮುಸ್ಲಿಮರಲ್ಲಿ ಒಗ್ಗಟ್ಟು, ಸಹೋದರ ಭಾವನೆ ಇದೆ. ಆದರೆ, ಈ ಗಲಭೆ ಹಿಂದೆ ರಾಜಕೀಯ ದ್ವೇಷ ಹೆಚ್ಚಾಗಿದೆ. ಇದಕ್ಕಾಗಿಯೇ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಸ್ಥಳೀಯ ಪಾಲಿಕೆ ಸದಸ್ಯರ ಕೈವಾಡ ಇದ್ದು, ತನಿಖೆಯಿಂದ ಎಲ್ಲವೂ ಹೊರಬರಲಿದೆ ಎಂದು ನವೀನ್ ಹೇಳಿದ್ದಾನೆ.