ಆರ್ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿರುವ ನಟ ದರ್ಶನ್
ಬೆಂಗಳೂರು, ಅ. 29: ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿದ್ದ ನಟಿ ಖುಷ್ಬೂ ಪ್ರಚಾರ ನಡೆಸಿದ ಬೆನ್ನಲ್ಲೆ ಚಿತ್ರನಟ ದರ್ಶನ್ ನನ್ನ ಪರ ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಇಂದಿಲ್ಲಿ ಪ್ರಕಟಿಸಿದ್ದಾರೆ.
ಗುರುವಾರ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರದ ನಿಮಿತ್ತ ನಟ ದರ್ಶನ್ ಅವರನ್ನ ಭೇಟಿಯಾಗಿದ್ದೇನೆ. ಅವರು ನನ್ನ ಪರ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ ನಟ ಯಶ್ ಸೇರಿದಂತೆ ಇನ್ನೂ ಕೆಲ ಪ್ರಮುಖ ನಟರು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು, ಆ ಕಲಾವಿದರ ಪ್ರಚಾರದ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಸ್ಪಷ್ಟಣೆ ನೀಡಿದರು.
ಕಣ್ಣೀರ ಮೇಲೆ ಮತ ಕೇಳುವುದಿಲ್ಲ: ನಾನು ಯಾವುದೇ ಕಾರಣಕ್ಕೂ ಕಣ್ಣೀರು ಹಾಕಿ ಮತ ಕೇಳುವುದಿಲ್ಲ. ಬದಲಿಗೆ ಕೆಲಸ ಮಾಡಿದ್ದು, ಕ್ಷೇತ್ರದ ಜನರಿಂದ ಮತ ಕೇಳುತ್ತೇನೆ ಎಂದ ಮುನಿರತ್ನ, ಬಿಜೆಪಿಗೆ ಹಣಕ್ಕಾಗಿ ಮಾರಾಟ ಆಗಿರುವ ಮುನಿರತ್ನ ತಾಯಿಯನ್ನು ಮಾರಿದಂತೆ ಎಂಬ `ಕೈ' ನಾಯಕರ ಆರೋಪ ಮಾಡಿದ್ದರಿಂದ ನಾನು ಕಣ್ಣೀರು ಹಾಕಿದೆ. ನನ್ನ ತಾಯಿ ತೀರಿ ಹೋಗಿ ಇಪ್ಪತ್ತೈದು ವರ್ಷಗಳೇ ಕಳೆದಿದೆ ಎಂದು ಹೇಳಿದರು.
ಈ ಹಿಂದೆ ಹೊಸದಿಲ್ಲಿಯಲ್ಲಿ ಸಂಸದ ಡಿ.ಕೆ.ಸುರೇಶ್ ಕಣ್ಣೀರು ಹಾಕಿದಾಗ, ನಾನು ಕನಿಕರ ವ್ಯಕ್ತಪಡಿಸಿದ್ದೆ. ಆದರೆ, ಅವರು ನನ್ನ ಕಣ್ಣೀರಿನ ಬಗ್ಗೆ ಲೇವಡಿ ಮಾಡಿದ್ದಾರೆ. ಇನ್ನು ದಿನೇಶ್ ಗುಂಡೂರಾವ್ ರಾಜಕಾರಣಿಯೇ ಅಲ್ಲ. ತಂದೆಯ ಹೆಸರಲ್ಲಿ ಬದುಕುತ್ತಿರೋರ ಬಗ್ಗೆ ನಾನು ಯಾವುದೇ ಸಂದರ್ಭದಲ್ಲಿಯೂ ಮಾತನಾಡುವುದಿಲ್ಲ ಎಂದು ಮುನಿರತ್ನ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.