ಕ್ರಿಕೆಟ್ ಬೆಟ್ಟಿಂಗ್ ಆರೋಪ: ಮೂವರ ಬಂಧನ
ಬೆಂಗಳೂರು, ನ.11: ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಹಣ ಪಣವಾಗಿ ಕಟ್ಟಿಕೊಂಡು ಜೂಜಾಟದಲ್ಲಿ ತೊಡಗಿದ್ದ ಪ್ರತ್ಯೇಕ ಎರಡು ಆರೋಪ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಇಲ್ಲಿನ ಪೂರ್ವ ವಿಭಾಗದ ಪೊಲೀಸರು ಕಮ್ಮನಹಳ್ಳಿಯ ರಂಗನಾಥ್(29) ಸೋಮೇಶ್(30) ಎಂಬುವರನ್ನು ಬಂಧಿಸಿ 2 ಲಕ್ಷ 35 ಸಾವಿರ ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ.
ಕೊರಟಗೆರೆ ತಾಲ್ಲೂಕಿನ ಎಂ.ಗೊಲ್ಲಹಳ್ಳಿ ಮೂಲದ ಬಂಧಿತ ಆರೋಪಿಗಳು ಹಳೆ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್ ಬಳಿ ಮೊಬೈಲ್ ಆ್ಯಪ್ ಮೂಲಕ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂದಪಟ್ಟಂತೆ ಈ ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಡಾ.ಎಸ್. ಡಿ.ಶರಣಪ್ಪ ಹೇಳಿದ್ದಾರೆ.
ಅದೇ ರೀತಿ, ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವರ್ತೂರು ಹಳೇ ಅಂಚೆ ಕಚೇರಿಯ ರಸ್ತೆ ನಿವಾಸಿ ಶಬ್ಬೀರ್ ಖಾನ್(32) ಎಂಬಾತನನ್ನು ಬಂಧಿಸಿ 4 ಲಕ್ಷ ರೂ, ನಗದು ಜಪ್ತಿ ಮಾಡಿ ಇಲ್ಲಿನ ವರ್ತೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.