ಬೆಂಗಳೂರು: ಜನ ವಸತಿ ಪ್ರದೇಶಗಳಲ್ಲಿರುವ ಕೆಮಿಕಲ್ ಫ್ಯಾಕ್ಟರಿಗಳ ಬಗ್ಗೆ ಮಾಹಿತಿ ನೀಡಲು ಸುತ್ತೋಲೆ
ಬೆಂಗಳೂರು, ನ. 15: ಮೈಸೂರು ರಸ್ತೆಯ ಹೊಸಗುಡ್ಡಹಳ್ಳಿಯ ರೇಖಾ ಕಾರ್ಖಾನೆಯಲ್ಲಿ ನಡೆದ ಅಗ್ನಿ ದುರಂತ ಹಿನ್ನೆಲೆ ಜನ ವಸತಿ ಪ್ರದೇಶಗಳಲ್ಲಿ ಕೆಮಿಕಲ್ ಫ್ಯಾಕ್ಟರಿಗಳಿದ್ದರೆ ಪರಿಶೀಲಿಸಿ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುತ್ತೋಲೆ ಹೊರಡಿಸಿದ್ದಾರೆ.
ತಮ್ಮ ಬೀಟ್ಗಳಲ್ಲಿ ಕಾರ್ಯ ನಿರ್ವಹಿಸುವ ಗಸ್ತು ಪೊಲೀಸರಿಗೆ ತಮ್ಮ ಪ್ರದೇಶಗಳಲ್ಲಿ ಕೆಮಿಕಲ್ ಫ್ಯಾಕ್ಟರಿಗಳು ಇವೆಯಾ ಎಂಬುದರ ಬಗ್ಗೆ ತಮ್ಮ ಠಾಣೆಯ ಇನ್ಸ್ಪೆಕ್ಟರ್ ಗಳಿಗೆ ಮಾಹಿತಿ ನೀಡುವಂತೆ ನಗರ ಎಲ್ಲಾ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ನಗರದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿರುವ ನಗರ ಪೊಲೀಸರು, ಪ್ರಾಥಮಿಕವಾಗಿ ಎಲ್ಲ ಠಾಣಾ ವ್ಯಾಪ್ತಿಯಲ್ಲಿರುವ ಕೆಮಿಕಲ್ ಫ್ಯಾಕ್ಟರಿಗಳ ಪಟ್ಟಿ ಮಾಡಲಾಗುತ್ತಿದೆ. ಬಳಿಕ ಈ ಮಾಹಿತಿಯನ್ನು ಅಗ್ನಿಶಾಮಕ ಇಲಾಖೆಗೆ ರವಾನಿಸಲಾಗುತ್ತಿದೆ. ಅಕ್ರಮ ಎಂದು ಕಂಡುಬಂದರೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
Next Story