ಜೈಲಿನಲ್ಲಿಯೇ ಸಂಪತ್ರಾಜ್ ವಿಚಾರಣೆ ನಡೆಸಿದ ಎನ್ಐಎ ತಂಡ
ಬೆಂಗಳೂರು,ನ.23: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಮೇಯರ್ ಸಂಪತ್ ರಾಜ್ರನ್ನು ಎನ್ಐಎ ಅಧಿಕಾರಿಗಳು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿಯೇ ವಿಚಾರಣೆ ನಡೆಸಿದ್ದಾರೆ.
ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್ ರಾಜ್ ಆಸ್ಪತ್ರೆಯವರು ಆರೋಗ್ಯ ತಪಾಸಣೆ ಮಾಡಿ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು.
ಜೈಲಿನ ಕ್ವಾರಂಟೈನ್ನಲ್ಲಿರುವ ಸಂಪತ್ ರಾಜ್ರನ್ನು ಎನ್ಐಎನ ಮೂವರು ಅಧಿಕಾರಿಗಳ ತಂಡ ತೀವ್ರ ವಿಚಾರಣೆ ನಡೆಸಿ ಮಾಹಿತಿಯನ್ನು ಕಲೆಹಾಕಿದೆ. ಜೈಲಿನಲ್ಲಿಯೇ ವಿಚಾರಣೆ ನಡೆಸಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ. ಸಿಸಿಬಿ ಪೊಲೀಸರು ಮೊದಲು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ, ಎನ್ಐಎ ಸಹ ವಿಚಾರಣೆಗೆ ನ್ಯಾಯಾಲಯದಲ್ಲಿ ಅನುಮತಿ ಕೇಳಿತ್ತು. ಎನ್ಐಎ ಮನವಿಯನ್ನು ಕೋರ್ಟ್ ಪುರಸ್ಕರಿಸಿದ ಕಾರಣ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಎನ್ಐಎ ಅಧಿಕಾರಿಗಳು ಸಂಪತ್ ರಾಜ್ ವಿಚಾರಣೆ ನಡೆಸಿ ಗಲಭೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದ್ದಾರೆ.