ಸೇತುವೆ ಕಾಮಗಾರಿಯಲ್ಲಿನ ಅವ್ಯವಹಾರ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ
ಬೆಂಗಳೂರು, ಡಿ.1: ಶಕ್ತಿಗಣಪತಿ ನಗರ ವಾರ್ಡ್-74ರ 4ನೇ ಮುಖ್ಯರಸ್ತೆಯಲ್ಲಿ ಸೇತುವೆ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಸೂಕ್ತ ತನಿಖೆ ಕೈಗೊಳ್ಳಬೇಕು ಹಾಗೂ ತುರ್ತಾಗಿ ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಕಮಲಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ಕಮಲಾನಗರ ಮಾರುಕಟ್ಟೆ ವೃತ್ತದಿಂದ ಸೇತುವೆ ನಿರ್ಮಾಣ ಕಾಮಗಾರಿ ಸ್ಥಳದವರೆಗೂ ಮೆರವಣಿಗೆ ನಡೆಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಮಾತನಾಡಿ, ಯಾವುದೇ ಅನುಮೋದನೆ ಇಲ್ಲದೇ ಸೇತುವೆ ಕಾಮಗಾರಿ ಆರಂಭಿಸಿರುವುದು ನೋಡಿದರೆ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವುದು ಕಂಡು ಬರುತ್ತದೆ ಎಂದರು.
ಈ ಭಾಗದಲ್ಲಿ ಕಳೆದ ಬಾರಿ ಮಳೆಯಿಂದ ಭಾರಿ ನಷ್ಟಗಳು ಸಂಭವಿಸಿದೆ. ಸೇತುವೆ ಕಾಮಗಾರಿಗಳಲ್ಲಿ ಅವ್ಯವಹಾರ ಮಾಡಿರುವ ಇಂಜನಿಯರ್ ಗಳು, ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ, ಸೂಕ್ತ ತನಿಖೆ ಮಾಡಬೇಕು ಮತ್ತು ತುರ್ತಾಗಿ ಸೇತುವೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಕಾರ್ಯಪಾಲಕ ಅಭಿಯಂತರಾದ ತಿಮ್ಮರಸು ಮತ್ತು ಅಧಿಕಾರಿಗಳ ತಂಡ ಆಗಮಿಸಿ, ಮುಂದಿನ 15 ದಿನಗಳ ಒಳಗಾಗಿ ಸೇತುವೆ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಮಲಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎನ್.ಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ನರಸಿಂಹಮೂರ್ತಿ, ಮಹಿಳಾ ಕಾಂಗ್ರೆಸ್, ಯುವಕಾಂಗ್ರೆಸ್ ವಿವಿಧ ಘಟಕಗಳ ಕಾರ್ಯಕರ್ತರು ಭಾಗವಹಿಸಿದ್ದರು.