ವಂಚನೆ ಆರೋಪಿ ಯುವರಾಜ್ 5 ದಿನ ಸಿಸಿಬಿ ಕಸ್ಟಡಿಗೆ
ಬೆಂಗಳೂರು, ಡಿ.17: ವಂಚನೆ ಆರೋಪದಡಿ ಬಂಧಿತನಾಗಿರುವ ಆರೋಪಿ ಯುವರಾಜ ಎಂಬಾತನ ಮೋಸದ ಜಾಲ ಬಗೆದಷ್ಟು ಬಯಲಾಗುತ್ತಿದ್ದು, ಈತ ನಿವೃತ್ತ ನ್ಯಾಯಾಧೀಶೆಯೊಬ್ಬರಿಗೂ ರಾಜ್ಯವೊಂದಕ್ಕೆ ರಾಜ್ಯಪಾಲೆ ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡಿದ್ದ ಎಂದು ತಿಳಿದುಬಂದಿದೆ.
ಎಪ್ರಿಲ್ ಮಾಸದಲ್ಲಿ ನಿವೃತ್ತ ನ್ಯಾಯಾಧೀಶೆ ಅನ್ನು ಸಂಪರ್ಕ ಮಾಡಿದ್ದ ಆರೋಪಿ ರಾಜ್ಯವೊಂದರ ರಾಜ್ಯಪಾಲೆಯಾಗಿ ಮಾಡಿಸುತ್ತೇನೆ ಎಂದು ನಂಬಿಸಿದ್ದ. ಬಳಿಕ ಆಕೆಯ ಬಳಿಯಿಂದ ಕೋಟ್ಯಂತರ ರೂ. ಹಣ ಪಡೆದಿದ್ದ ಎಂದು ಹೇಳಲಾಗುತ್ತಿದೆ.
ಅಷ್ಟೇ ಅಲ್ಲದೆ, ಈತ ಜಿಲ್ಲಾ ಮಟ್ಟದ ಮುಖಂಡರನ್ನು ಗುರಿಯಾಗಿಸಿಕೊಂಡು ತಮಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಹೇಳಿ, ಅವರನ್ನು ಜತೆಯಲ್ಲಿ ಸೇರಿಸಿ ಹೊಸದಿಲ್ಲಿ, ಮುಂಬೈ ಸೇರಿದಂತೆ ಅನೇಕ ಕಡೆ ಪ್ರವಾಸ ಮಾಡುತ್ತಿದ್ದ. ಬಳಿಕ ಬಿಜೆಪಿ ನಾಯಕರ ಕಚೇರಿಗಳಿಗೆ ಹೋಗಿ, ಕಾರ್ಯಕ್ರಮ, ಸಂಘಟನೆ ನೆಪದಲ್ಲಿ ಅವರೊಂದಿಗೆ ಸಂವಹನ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
5 ದಿನ ವಶಕ್ಕೆ: ಸದ್ಯ ಆರೋಪಿ ಯುವರಾಜ್ನನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಸಿಬಿ ಪೊಲೀಸರು, ಡಿ.22ರವರೆಗೂ ಕಸ್ಟಡಿಗೆ ಪಡೆದಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಿದ್ದಾರೆ.